ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾಗಿರುವುದನ್ನು ವಿರೋಧಿಸಿ ಕುಸ್ತಿಗೆ ವಿದಾಯ ಹೇಳಿರುವ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರಿಗೆ ಕುಸ್ತಿಪಟು ವೀರೇಂದ್ರ ಸಿಂಗ್ ಯಾದವ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಕ್ಷಿ ಮಲಿಕ್ ಅವರನ್ನು ಬೆಂಬಲಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಮರಳಿಸಿದ ಬೆನ್ನಲ್ಲೇ ವೀರೇಂದ್ರ ಸಿಂಗ್ ಕೂಡ “ನಾನು ಪದ್ಮಶ್ರೀ ವಾಪಸ್ ಕೊಡುತ್ತೇನೆ” ಎಂದಿದ್ದಾರೆ.
“ನಾನು ನನ್ನ ಸಹೋದರಿ, ದೇಶದ ಮಗಳಿಗಾಗಿ ಪದ್ಮಶ್ರೀ ಹಿಂದಿರುಗಿಸುತ್ತೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ ನಿಮ್ಮ ಮಗಳು, ನನ್ನ ಸಹೋದರಿ ಸಾಕ್ಷಿ ಮಲಿಕ್ ಬಗ್ಗೆ ನನಗೆ ಹೆಮ್ಮಯಿದೆ. ನಾನು ದೇಶದ ಉನ್ನತ ಆಟಗಾರರನ್ನು ಕೂಡ ಈ ವಿಚಾರದಲ್ಲಿ ನಿಮ್ಮ ನಿರ್ಧಾರ ಕೋರುತ್ತೇನೆ” ಎಂದು ವೀರೇಂದ್ರ ಸಿಂಗ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ನೀರಜ್ ಚೋಪ್ರಾ ಅವರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ.
ಸಾಕ್ಷಿ ಮಲಿಕ್ ಅವರನ್ನು ಬೆಂಬಲಿಸಿ ನಿನ್ನೆ(ಡಿ.22) ಸಂಜೆ ಬಜರಂಗ್ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ತೆರಳಿದ್ದರು. ಇದನ್ನು ಪ್ರಧಾನಿ ಮೋದಿಯವರಿಗೆ ತಲುಪಿಸಿ ಎಂದಿದ್ದರು. ಬಳಿಕ ಪೊಲೀಸರು ಬಂದು ಪ್ರಶಸ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ.
“ಮಹಿಳಾ ಕುಸ್ತಿಪಟುಗಳಿಗೆ ಸರಿಯಾದ ಗೌರವ ಸಿಗದಿದ್ದಾಗ ನಾನು ಈ ಪ್ರಶಸ್ತಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾವು 40 ದಿನಗಳ ಕಾಲ ರಸ್ತೆಯಲ್ಲಿದ್ದೆವು. ಸರ್ಕಾರ ನಮಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ನಮ್ಮ ಹೋರಾಟವು ಸರ್ಕಾರದ ವಿರುದ್ಧವಲ್ಲ ಒಬ್ಬ ವ್ಯಕ್ತಿಯ ವಿರುದ್ದ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ಆದರೆ, ಈಗ ಏನಾಗ್ತಿದೆ? ನನಗೆ ಈ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ” ಎಂದು ಪ್ರಶಸ್ತಿ ಹಿಂದಿರುಗಿಸಲು ಬಂದಿದ್ದ ವೇಳೆ ಬಜರಂಗ್ ಪೂನಿಯಾ ಬೇಸರದಿಂದ ಹೇಳಿದ್ದಾರೆ.
“ಹೆಣ್ಣುಮಕ್ಕಳ ಪೋಷಕರು ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ನೀಡದಿದ್ದರೆ, ಮತ್ತೆ ನಾವು ಹೇಗೆ ನ್ಯಾಯ ಪಡೆಯುವುದು? ಪ್ರಧಾನಮಂತ್ರಿ, ಉಪ ರಾಷ್ಟ್ರಪತಿ ಮತ್ತು ರಾಷ್ಟ್ರಪತಿಗಳು ಎಲ್ಲರೂ ಈ ರೀತಿ ಯಾಕೆ ನಡೆಯುತ್ತಿದೆ ಎಂದು ಉತ್ತರಿಸಬೇಕು. ಇಂತಹ ಘಟನೆಗಳು ನಮ್ಮ ನ್ಯಾಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ” ಎಂದು ಹೇಳಿದ್ದಾರೆ ವೀರೇಂದ್ರ ಸಿಂಗ್.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಫೆಡರೇಶನ್ನ ನೂತನ ಅಧ್ಯಕ್ಷರಾಗಿ ಡಿ.21ರಂದು ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ಕುಸ್ತಿ ತ್ಯಜಿಸುವುದಾಗಿ ಘೋಷಿಸಿದ ಒಲಿಂಪಿಕ್ ಪದಕ ವಿಜೇತೆ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್, ಪ್ರತ್ರಕರ್ತರ ಮುಂದೆಯೇ ತಮ್ಮ ಬೂಟು ಕಳಚಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ ಬೆನ್ನಲ್ಲೇ ಅವರಿಗೆ ಬೆಂಬಲ ವ್ಯಕ್ತಪಡಿಸಿ ಬಜರಂಗ್ ಪೂನಿಯಾ ಪದ್ಮಶ್ರೀ ಹಿಂದಿರುಗಿಸಿದ್ದಾರೆ.