ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಅಪಪ್ರಚಾರ ಮಾಡಿದರೂ, ಅವರು ನಿಜವಾದ ಜನನಾಯಕ ಎಂದು ದೇಶದ ಜನರೇ ಮಾತನಾಡುತ್ತಿದ್ದಾರೆಂದು ಮಾಜಿ ಸಚಿವ ಪಿಎಂ.ನರೇಂದ್ರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಹುಲ್ ಗಾಂಧಿಯವರು ಇಂದು ಭಾರತ್ ಜೋಡೋ ಯಾತ್ರೆಯ ಮೂಲಕ ಐದನೇ ರಾಜ್ಯದಲ್ಲಿ ನಡೆಯುತ್ತಿದ್ದಾರೆ. ಈ ಯಾತ್ರೆಗೆ ಲಕ್ಷಾಂತರ ಜನರು ಬರುತ್ತಿದ್ದಾರೆ. ಪ್ರೀತಿ ಇಲ್ಲದಿದ್ದರೆ ಇಷ್ಟೊಂದು ಜನರು ಬರುತ್ತಿದ್ದರೇ ಎಂದ ಅವರು, ರಾಹುಲ್ ಗಾಂಧಿ ಪ್ರಬಲ ನಾಯಕತ್ವ ಜನರಿಗೆ ಗೊತ್ತಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಅಧಿಕಾರ ದಾಹ ಇದ್ದಿದ್ದರೆ ಅವರು ಮನಮೋಹನ್ ಸಿಂಗ್ ಅವರನ್ನು ದೇಶದ ಪ್ರಧಾನಿಯಾಗಿ ಮಾಡುತ್ತಿರಲಿಲ್ಲ. ಅವರ ತ್ಯಾಗ ದೊಡ್ಡದು ಎಂದರು.
ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ಆದ್ದರಿಂದ ಸತ್ಯಗಳು ಮರೆಮಾಚಲ್ಪಡುತ್ತಿವೆ.ಈಗ ದೇಶದ ಜನರಿಗೆ ಬಿಜೆಪಿಯವರು ಬರೀ ಸುಳ್ಳು ಹೇಳಿ ದೇಶವನ್ನು ದಿವಾಳಿ ಮಾಡಿದ್ದಾರೆಂಬ ಸತ್ಯ ಅರಿವಾಗುತ್ತಿದೆ ಎಂದರು.
ಹೊಸ ಚೈತನ್ಯ
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್ ವರಿಷ್ಠರು ಎಐಸಿಸಿ ಆಧ್ಯಕ್ಷರನ್ನಾಗಿ ಮಾಡಿ ಹೊಸ ಜವಾಬ್ದಾರಿ ವಹಿಸಿದ್ದು, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಶಕ್ತಿ ಬಂದಿದೆ. ದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಖರ್ಗೆಯವರು ಪ್ರಬಲ ಹೋರಾಟ ರೂಪಿಸಲಿದ್ದಾರೆ. ಬಿಜೆಪಿ ಆಡಳಿತದಿಂದ ದಿವಾಳಿಯಾಗಿರುವ ದೇಶಕ್ಕೆ ಹೊಸ ಚೈತನ್ಯ ತರಲಿದ್ದಾರೆ ಎಂದರು.
ನ.6 ಕ್ಕೆ ಅಭಿನಂದನೆ
ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನ.6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಗುವುದು.
ಅಂದು ಮಧ್ಯಾಹ್ನ 2.30ಕ್ಕೆ ಸರ್ವೋದಯ ಸಮಾವೇಶ ಆರಂಭವಾಗಲಿದ್ದು, ಸಮಾರಂಭದಲ್ಲಿ ಮಲ್ಲಿಕಾರ್ಜನ ಖರ್ಗೆ ಅವರನ್ನು ಅಭಿನಂದಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಿಂದಲೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಡಾ.ಎಚ್.ಕೃಷ್ಣ, ವೀಣಾಶಂಕರ್, ಕೆ.ಎಚ್.ನಾಗರಾಜು, ಕೃಷ್ಣ, ಕಿರಣ್ ಹಾಜರಿದ್ದರು.