ಮಂಡ್ಯದ ಪ್ರೊ.ಎಚ್ ಎಲ್ ಕೇಶವಮೂರ್ತಿ ಪ್ರತಿಷ್ಠಾನ ವತಿಯಿಂದ ಡಿ.28ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ಗಾಂಧಿಭವನದಲ್ಲಿ 6ನೇ ವರ್ಷದ ಪ್ರೊ. ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಬಾರಿಯ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ಕುಂದಗೋಳದ ಫಾತಿಮಾ ಬೀಬೀ ಮಹಿಳಾ ಸ್ವಸಹಾಯ ಸಂಘವು ಆಯ್ಕೆಯಾಗಿದ್ದು, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ ಪ್ರಶಸ್ವಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಕುರಿತು ಮೈಸೂರಿನ ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣ ಮಾತನಾಡುವರು. ಪ್ರೊ. ಎಚ್ ಎಲ್ ಕೇಶವಮೂರ್ತಿ ಪ್ರತಿಷ್ಠಾನ ಅಧ್ಯಕ್ಷ ಗುರುಪ್ರಸಾದ ಕೆರಗೋಡು ಅಧ್ಯಕ್ಷತೆ ವಹಿಸುವರು.
ಬೀಬೀ ಫಾತಿಮಾ ಮಹಿಳಾ ಸ್ವ ಸಹಾಯ ಸಂಘದ ಸಾಧನೆ
ಈ ಸಂಘವು ಧಾರವಾಡದ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ 2018ರಲ್ಲಿ ಪ್ರಾರಂಭವಾಯಿತು. 12 ಜನ ಮಹಿಳಾ ಸದಸ್ಯರಿರುವ ಈ ಸಂಘವು ಪ್ರಾರಂಭದಲ್ಲಿ ನೈಸರ್ಗಿಕ ಉತ್ಪನ್ನಗಳಾದ ಸೋಪು, ಶಾಂಪು ಮತ್ತು ಫೇಸ್ ವಾಶ್ ತಯಾರಿಸುವ ತರಬೇತಿಯನ್ನು ಪಡೆದು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿತು. ತದನಂತರದಲ್ಲಿ ರೈತರ ಜೊತೆಗೆ ಸಾವಯವ ಕೃಷಿಗೆ ಬೆಂಬಲವಾಗಿ ನಿಂತು ಸಿರಿಧಾನ್ಯ ಉತ್ಪಾದನೆ ಒತ್ತು ನೀಡಿತು. ಕುಂದಗೋಳ ಭಾಗವು ಒಂದು ಕಾಲದಲ್ಲಿ ಸಿರಿಧಾನ್ಯ ಉತ್ಪಾದನೆಗೆ ಹೆಸರವಾಸಿಯಾಗಿತ್ತು. ಬದಲಾದ ಕೃಷಿ ವ್ಯವಸ್ಥೆಯಿಂದ ಸಿರಿಧಾನ್ಯ ಉತ್ಪಾದನೆ ತುಂಬಾ ಕಡಿಮೆಯಾಗಿತ್ತು. ಆಗ ಸಂಘವು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಜವಾರಿ ಬೀಜಗಳನ್ನು ವಿತರಿಸಿತು.
ಸಂಘವು ರೈತರಿಗೆ ಅರಿವು ಮೂಡಿಸಿ ಸಿರಿಧಾನ್ಯ ಬೆಳೆಯಲು, ಬಳಸಲು ಪ್ರೋತ್ಸಾಹಿಸುತ್ತಿದೆ. ಬೀಜ ಬ್ಯಾಂಕ್ ಮೂಲಕ ಬೀಜಗಳನ್ನು ಮೊದಲು ಸ್ಥಳೀಯ 22 ಹಳ್ಳಿಗಳಿಗೆ ಮಾತ್ರ ವಿತರಿಸಲಾಗುತ್ತಿತ್ತು, 2022ರಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಬೀಜ ವಿತರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಐದು ಜಿಲ್ಲೆಗಳ ರೈತರಿಗೆ ವಿತರಿಸಿದ್ದಾರೆ. ಸರ್ಕಾರದ ಅನೇಕ ಯೋಜನೆಗಳಿಗೆ ಸಂಘದ ಬೀಜಬ್ಯಾಂಕ್ ಮೂಲಕ ಗುಣಮಟ್ಟದ ದೇಸೀ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸಂಘದ ಕೆಲಸಗಳನ್ನು ವಿಸ್ತರಿಸುವ ದೃಷ್ಟಿಯಿಂದ ‘ದೇವಧಾನ್ಯ ರೈತ ಉತ್ಪಾದಕರ ಕಂಪನಿ’ ಸ್ಥಾಪಿಸಿದ್ದು, ಈ ಕಂಪನಿಯ ಬೆನ್ನೆಲುಬಾಗಿ ಸಂಘವು ಸಿರಿಧಾನ್ಯಗಳ ಸಂಸ್ಕರಣೆ ಮಾಡಿ ಮಾರಾಟಕ್ಕೆ ಒದಗಿಸುತ್ತಿದೆ.
ಸಂಘದ ಮುಂದಾಳತ್ವ ವಹಿಸಿರುವ ಬೀಬಿ ಜಾನ್ ಮೌಲಾನಾಜ್ ಹಳೇಮನಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮುನ್ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇವರ ಈ ಪ್ರಯತ್ನವನ್ನು ಗುರುತಿಸಿ ‘ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ಅವಾರ್ಡ್ 2022’ ಲಭಿಸಿದೆ. ಬೆಂಗಳೂರು ಸ್ಫೂರ್ತಿಧಾಮ ನೀಡುವ ‘ ಬೋಧಿವರ್ದನ ಪ್ರಶಸ್ತಿಯು ಲಭಿಸಿದೆ.