ನಿನ್ನ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದ್ದರೆ…
ಮತ್ತೊಂದು ಕೋಣೆಯಲ್ಲಿ ನೀನು
ನಿಶ್ಚಿಂತೆಯಿಂದ ಮಲಗಬಲ್ಲೆಯಾ?
ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ…
ಮತ್ತೊಂದು ಕೋಣೆಯಲ್ಲಿ ನೀನು
ಪರವಶನಾಗಿ ಪ್ರಾರ್ಥನೆ ಮಾಡಬಲ್ಲೆಯಾ?
ಹೌದೆಂದರೆ ನಿನಗೆ
ಹೇಳಲೇನೂ ಉಳಿದಿಲ್ಲ ನನಗೆ..
ಈ ಲೋಕದಲ್ಲಿ
ಮನುಷ್ಯರ ಪ್ರಾಣಕ್ಕಿಂತ
ಮಿಗಿಲಾದದ್ದು ಬೇರೇನಿಲ್ಲ..
ಈಶ್ವರನೂ ಅಲ್ಲ ,
ಜ್ನಾನವೂ ಅಲ್ಲ ,
ಚುನಾವಣೆಯೂ ಅಲ್ಲ..
ಹೆಣಗಳ ಸುಫರ್ದಿಯಲ್ಲಿರುವ
ವಿವೇಕ ಕುರುಡಾಗಿರುತ್ತದೆ..
ಬಂದೂಕಿನ ನೆರಳಲ್ಲಿ
ಜಾರಿಯಾಗುವ ಶಾಸನ
ಹಂತಕರ ದಂಧೆಯಾಗಿರುತ್ತದೆ..
ನೆನಪಿಟ್ಟುಕೋ,
ಒಂದು ಕಂದಮ್ಮನ ಹತ್ಯೆ..
ಒಂದು ಮಹಿಳೆಯ ಸಾವು..
ಗುಂಡಿನಿಂದ ಛಿದ್ರಗೊಂಡ
ಒಬ್ಬ ಮನುಷ್ಯನ ದೇಹ..
ಕೇವಲ ಸರ್ಕಾರವೊಂದರ ಪತನವಲ್ಲ
ಒಂದಿಡೀ ರಾಷ್ಟ್ರದ ಅಧಃಪತನ
ಹಿಂದಿ ಮೂಲ- ಸರ್ವೇಶ್ವರ್ ದಯಾಳ್ ಸಕ್ಸೇನ
ಕನ್ನಡ- ಶಿವಸುಂದರ್