ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ಅವರ ನಿಧನಕ್ಕೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್ ಕಂಬನಿ ಮಿಡಿದರು.
ಮುನಾವರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದುಬೈನಲ್ಲಿದ್ದ ಜಪ್ರುಲ್ಲಾ ಖಾನ್ ಅವರು ಬುಧವಾರ ದುಬೈನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುನಾವರ್ ಖಾನ್ ಅವರ ಮನೆಗೆ ಬಂದು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಈ ಸಂದರ್ಭದಲ್ಲಿ ಮುನಾವರ್ ಖಾನ್ ಅವರ ಮಕ್ಕಳು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಮುನಾವರ್ ಖಾನ್ ಅವರೊಂದಿಗೆ ಹಲವು ವರ್ಷಗಳಿಂದ ಸ್ನೇಹವಿತ್ತು, ರಾಜಕೀಯವಾಗಿ ನಾನು ಜೆಡಿಎಸ್ ಪಕ್ಷದಲ್ಲಿದ್ದೆ.ಮುನಾವರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ರಾಜಕೀಯವಾಗಿ ಇಬ್ಬರ ನಿಲುವು ಬೇರೆಯಾಗಿದ್ದರೂ ವೈಯಕ್ತಿಕವಾಗಿ ಗೌರವ ಹೊಂದಿದ್ದವು. ನನ್ನ ಮಗನ ಮದುವೆಗೆ ಆಗಮಿಸಿ ಶುಭ ಹಾರೈಸಿದ್ದರು. ಮುನಾವರ್ ಖಾನ್ ಹಲವು ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದರು. ಇಂದು ಅವರು ನಮ್ಮನ್ನಗಲಿರುವುದು ಅತೀವ ದುಃಖ ತಂದಿದೆ ಎಂದು ಜಪ್ರುಲ್ಲಾಖಾನ್ ತಮ್ಮ ಒಡನಾಟವನ್ನು ಸ್ಮರಿಸಿದರು.