ಮೆದುಳು ಜ್ವರವು 1 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೆದುಳು ಜ್ವರ ನಿಯಂತ್ರಣದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಎಂದು ಮಂಡ್ಯ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದರ ತಿಳಿಸಿದರು.
ಮಂಡ್ಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೆದುಳು ಜ್ವರ ವಿಶೇಷವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆಗಾಗಿ ಶಾಲೆಯ ಪ್ರಾರ್ಥನೆ ಸಂದರ್ಭ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಮೆದುಳ ಜ್ವರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ. ಮೆದುಳ ಜ್ವರ ನಿಯಂತ್ರಿಸುವಲ್ಲಿ ಸಹಕರಿಸಿ, ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಾಗಿ ಮೆದುಳು ಜ್ವರದ ಬಗ್ಗೆ ನಿಗಾವಹಿಸಿ. ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಸುಚಿತ್ವ ಕಾಪಾಡಿಕೊಳ್ಳಿ ಎಂದರು.
ಮೆದುಳು ಜ್ವರದ ಬಗ್ಗೆ ಗ್ರಾಮದ ಪರಿಮಿತಿಯಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದು ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸವಾಗಲಿ ಎಂದರು.
ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ತೆರಳಿ ಉಚಿತವಾಗಿ ಮೆದುಳು ಜ್ವರ ನಿಯಂತ್ರಣದ ಚುಚ್ಚುಮದ್ದು ನೀಡುತ್ತಿದ್ದೇವೆ. ಮಿಮ್ಸ್ ಆಸ್ಪತ್ರೆಯಲ್ಲೂ ಚುಚ್ಚುಮದ್ದು ಲಭ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪ್ರತಿ ಗುರುವಾರ ಚುಚ್ಚುಮದ್ದು ನೀಡುತ್ತಿದೇವೆ. ಇದರಿಂದ ಮೆದುಳು ಜ್ವರದ ನಿಯಂತ್ರಣಕ್ಕೆ ಸಹಕಾರಿಯಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆವಹಿಸಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಜಿಲ್ಲೆಯ ಸಾರ್ವಜನಿಕರು ಹೊರ ದೇಶ ಹಾಗೂ ಹೊರ ರಾಜ್ಯಗಳಿಗೆ ಪ್ರವಾಸ ಹೋಗಿ ಬಂದಾಗ ಕೋವಿಡ್ ಲಕ್ಷಣಗಳು ಇದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ, ಶಾಲಾ ಕಾಲೇಜುಗಳಲ್ಲಿ ಕೋವಿಡ್ ನಿಯಮಪಾಲಿಸಿ. ಜೊತೆಗೆ ಮೂಲ ಸೌಕರ್ಯದ ಬಗ್ಗೆ ನಿಗಾ ವಹಿಸಿ ಎಂದರು.
ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಜವರೇಗೌಡ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳ, ಸಿಡಿಪಿಒ ಕುಮಾರಸ್ವಾಮಿ, ತಾಲ್ಲೂಕು ಪಂಚಾಯತಿ ಅಧಿಕಾರಿ ಶ್ರೀನಿವಾಸ್, ಬಿಇಒಗಳಾದ ಸೌಭಾಗ್ಯ, ಶಶಿಧರ್, ತಂಬಾಕು ನಿಯಂತ್ರಣ ಅಧಿಕಾರಿ ತಿಮ್ಮರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.