ಪಾಂಡವಪುರ ಪುರಸಭೆಯಲ್ಲಿ ತೆರವಾಗಿದ್ದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಎರಡೂ ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಪುರಸಭೆಯ 2ನೇ ವಾರ್ಡ್ ಹಾಗೂ 9ನೇ ವಾರ್ಡ್ ಸದಸ್ಯರು ಅಕಾಲಿಕ ಮರಣಕ್ಕೀಡಾದ ಕಾರಣದಿಂದ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು. 2ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿ ಯಶ್ವಂತ್ ಕುಮಾರ್ 380 ಮತಗಳನ್ನು ಗಳಿಸಿ ತಮ್ಮ ಪ್ರತಿಸ್ಪರ್ಧಿ ರೈತಸಂಘದ ರಾಜೇಂದ್ರ(216) ಅವರನ್ನು ಪರಾಭವಗೊಳಿಸಿ ಜಯ ಸಾಧಿಸಿದರು. ಬಿಜೆಪಿ ಅಭ್ಯರ್ಥಿ 21 ಹಾಗೂ ಕೆಆರ್ ಎಸ್ ಪಕ್ಷದ ಅಭ್ಯರ್ಥಿ ಕೇವಲ ಒಂದು ಮತ ಪಡೆದರು.
9ನೇ ವಾರ್ಡ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಜ್ಯೋತಿಲಕ್ಷ್ಮಿ ಜಯ ಸಾಧಿಸಿದರು. ಅವರು 171 ಮತ ಗಳಿಸಿದರೆ, ರೈತಸಂಘದ ಅಭ್ಯರ್ಥಿ ಎಸ್.ರಾಜು-128, ಬಿಜೆಪಿ ಅಭ್ಯರ್ಥಿ ಸೋಮಶೇಖರ್-81 ಮತಗಳನ್ನು ಪಡೆದರು.
ಜೆಡಿಎಸ್ ಅಭ್ಯರ್ಥಿ ಜ್ಯೋತಿಲಕ್ಷ್ಮಿ43 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.
ರೈತಸಂಘಕ್ಕೆ ಹಿನ್ನಡೆ
ವಿಧಾನಸಭೆ ಚುನಾವಣೆ ನಡೆದು ಕೇವಲ 7 ತಿಂಗಳಲ್ಲಿ ನಡೆದ ಮೊದಲ ಉಪಚುನಾವಣೆಯಲ್ಲಿ ಎರಡು ವಾರ್ಡ್ ಗಳಲ್ಲೂ ಸೋತಿರುವ ರೈತಸಂಘದ ಅಭ್ಯರ್ಥಿಗಳು ಸೋಲು ಕಂಡಿರುವುದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಹಿನ್ನಡೆ ತಂದಿದೆ. ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಬಲ ಬಂದಿದೆ.ಅಲ್ಲದೆ ಜೆಡಿಎಸ್ ಪಕ್ಷಕ್ಕೆ ಚೈತನ್ಯ ತುಂಬಿದೆ.
ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದರೂ ಸಹ ಒಂದು ವಾರ್ಡ್ ನ್ನು ಸಹ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಜತೆಗೆ ಚುನಾವಣೆಯ ನಡೆಯುತ್ತಿದ್ದರೂ ಸಹ ಕ್ಷೇತ್ರದ ಶಾಸಕರು 4ನೇ ಬಾರಿಗೆ ಅಮೇರಿಕ ಪ್ರವಾಸದಲ್ಲಿದ್ದ ಕಾರಣ ರೈತಸಂಘದ ಅಭ್ಯರ್ಥಿಗಳು ಸೋಲಿಗೆ ಕಾರಣ ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ.
ಮತದಾರರಿಗೆ ಸಿಎಸ್ಪಿ ಕೃತಜ್ಞತೆ
ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್ ಅಭ್ಯರ್ಥಿಗಳಾದ ಜ್ಯೋತಿಲಕ್ಷ್ಮಿ ಹಾಗೂ ಯಶ್ವಂತ್ ಕುಮಾರ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಪುರಸಭೆಯ ಎರಡು ವಾರ್ಡ್ ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ವಾರ್ಡಿನ ಜನತೆಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ಎರಡೂ ವಾರ್ಡ್ ಗಳು ಮತ್ತೆ ಜೆಡಿಎಸ್ ತೆಕ್ಕೆಗೆ ಸೇರ್ಪಡೆಗೊಂಡಿದ್ದು, ಒಟ್ಟು 18 ಮಂದಿ ಪುರಸಭೆ ಸದಸ್ಯರಿದ್ದಾರೆ. ಎಲ್ಲಾ ಸದಸ್ಯರು ಸೇರಿ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯರಾದ ಗಿರೀಶ್, ಸೋಮಶೇಖರ್, ಶಿವಕುಮಾರ್, ಚಂದ್ರು ಅರ್ಚನ, ಶ್ವೇತ, ಮುಖಂಡರಾದ ವೈರಮುಡಿಗೌಡ, ಬಿ.ಎಸ್.ಜಯರಾಮು ಸೇರಿದಂತೆ ಹಲವರಿದ್ದರು.