ಮಂಡ್ಯ ಜಿಲ್ಲೆಯ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇದರ ಪರಿಣಾಮ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಲೈಂಗಿಕ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ವಿಮೋಚನ ಮಹಿಳಾ ಸಂಘಟನೆಯ ಶೆಲಿನ ಆತಂಕ ವ್ಯಕ್ತಪಡಿಸಿದರು.
ವಿಮೋಚನ ಮಹಿಳಾ ಸಂಘಟನೆ ಬೆಂಗಳೂರು ಮತ್ತು ಮಂಡ್ಯ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗೆ ಪತ್ತೆ ನಿಷೇಧ ಕಾಯ್ದೆ’ ಕುರಿತು ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಅಂಗನವಾಡಿ ಆಶಾ ಆರೋಗ್ಯ ಕಾರ್ಯಕರ್ತರಿಗೆ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಈ ವಿಷಯಗಳ ಬಗ್ಗೆ ಸಮುದಾಯಕ್ಕೆ ಮೂಡಿಸುವ ಅರಿವು ಮೂಡಿಸಬೇಕು. ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ಮುಂದಾಗಬೇಕೆಂದರು.
ವಿಮೋಚನಾ ಸಂಸ್ಥೆಯ ಜಿಲ್ಲಾ ಸಂಯೋಕ ಜನಾರ್ಧನ ಮಾತನಾಡಿ, ನಮ್ಮ ಸಂಘಟನೆಯು ಕಳೆದ 20 ವರ್ಷಗಳಿಂದ ಹೆಣ್ಣು ಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನ, ಹೆಣ್ಣು ಭ್ರೂಣ ಹತ್ಯೆ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದೆ. ಆದರೂ ಸಮಸ್ಯೆ ತಡೆಗಟ್ಟಲು ಸಾಧ್ಯವಾಗಿಲ್ಲ, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗದ ಹೊರತು ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು.
ಕೆಲವು ವೈದ್ಯರು ಹಣದಾಸೆಗೋಸ್ಕರ ಸ್ಕ್ಯಾನಿಂಗ್ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಕಾನೂನು ಮೀರಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಮಾಡುತ್ತಿದ್ದಾರೆ, ಸರಿಯಾದ ಸಾಕ್ಷಿಗಳ ಕೊರತೆಯಿಂದ ಕಾನೂನು ಕ್ರಮ ಕೈಗೊಂಡು, ಶಿಕ್ಷಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಕಂಡು ಬಂದರೆ ಸಂಬಂಧಪಟ್ಟ ಇಲಾಖೆಯವರಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.
ನಂತರ ಕಾರ್ಯಕರ್ತರ ಜೊತೆ ಸಂವಾದ ನಡೆಸಲಾಯಿತು, ಕಾರ್ಯಕ್ರಮದಲ್ಲಿ ವೃತ್ತ ಮೇಲ್ವಿಚಾರಕಿ ರಂಜಿತ ಪೋಷಣ ಅಭಿಯಾನದ ಚೇತನ, ವಿಮೋಚನ ಮಹಿಳಾ ಸಂಘಟನೆಯ ಇಂಪನ, ಆಶಾ, ಅಂಗನವಾಡಿ ಆರೋಗ್ಯ ಕಾರ್ಯಕರ್ತೆಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.