ಅಯೋಧ್ಯೆಯಲ್ಲಿ ರಾಮನಿಗಿಂತ ಪ್ರಧಾನಿ ನರೇಂದ್ರ ಮೋದಿಯೇ ಹೆಚ್ಚು ಗೋಚರಿಸುತ್ತಿದ್ದಾರೆ, ಮೋದಿ ಬಗ್ಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ ಎಂದು ಆರ್ಜೆಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಹೇಳಿದ್ದು, ರಾಮಮಂದಿರ ಉದ್ಘಾಟನೆಯನ್ನು ರಾಜಕೀಯ ಗೊಳಿಸಿದ್ದಕ್ಕೆ ಬಿಜೆಪಿ ಮತ್ತು ಮೋದಿಯನ್ನು ಟೀಕಿಸಿದ್ದಾರೆ.
ಹಿಂದುತ್ವದ ಅಜೆಂಡಾದಲ್ಲಿ ಕೆಲಸ ಮಾಡುತ್ತಿರುವವರು ದೇಶದಲ್ಲಿ ಹಿಂದುಳಿದ ವರ್ಗ, ದಲಿತ ಮತ್ತು ವಂಚಿತ ವರ್ಗದ ಜನರುಗಳಿಸಿದ್ದ ಸಾಮಾಜಿಕ ನ್ಯಾಯವನ್ನು ಮುಗಿಸಲು ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ಜಾತಿಯಲ್ಲಿ ಹುಟ್ಟಿ ಹಿಂದುತ್ವದ ಅಜೆಂಡಾಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ತಿವಾರಿ ಹೇಳಿದ್ದಾರೆ.
ಬಿಜೆಪಿಯು ಈ ಸಮಾರಂಭದಲ್ಲಿ ಇಡೀ ಸರ್ಕಾರಿ ಯಂತ್ರವನ್ನು ಬಳಸುತ್ತಿದೆ ಇದು ನಮ್ಮ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ಬಿಜೆಪಿ ಮತ್ತು ನರೇಂದ್ರ ಮೋದಿಯವರ ರಾಜಕೀಯ ಪ್ರಚಾರವಾಗಿದೆ. ಏಕೆಂದರೆ ಅವರ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದ್ದಾರೆ ಅವರು ರಾಮ ಮತ್ತು ಮಂದಿರದ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆದಿ ಶಂಕರಾಚಾರ್ಯರು ದೇಶದಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದ್ದಾರೆ. ಜನರು ಅವುಗಳನ್ನು ‘ಚಾರ್ ಧಾಮ್’ ಎಂದು ತಿಳಿದಿದ್ದಾರೆ. ನಾಲ್ಕು ಧಾಮಗಳ ಶಂಕರಾಚಾರ್ಯರು ಅಯೋಧ್ಯೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ತಾವು ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅವುರನ್ನು ಹಿಂದೂ ವಿರೋಧಿ ಎಂದು ಘೋಷಿಸುವಷ್ಟು ಧೈರ್ಯ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಈ ಮೊದಲು ಎಐಸಿಸಿ ಪ್ರಧಾನ ಕಛೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ ಶಂಕರಾಚಾರ್ಯರ ವಿರುದ್ಧ ಆರೆಸ್ಸೆಸ್-ಬಿಜೆಪಿ ಪ್ರಚಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಬಿಜೆಪಿ ಸಂಪೂರ್ಣ ಐಟಿ ಸೆಲ್ ನಾಲ್ಕು ಪೀಠಗಳ ಶಂಕರಾಚಾರ್ಯರ ವಿರುದ್ಧ ಅಭಿಯಾನವನ್ನು ನಡೆಸುತ್ತಿದೆ. ಈ ಇಡೀ ಸಮಾರಂಭದಲ್ಲಿ ಧರ್ಮ, ನೀತಿ ಮತ್ತು ನಂಬಿಕೆ ಎಲ್ಲಿಯೂ ಗೋಚರಿಸುವುದಿಲ್ಲ, ಕೇವಲ ರಾಜಕೀಯ ಗೋಚರಿಸುತ್ತದೆ. ದೇವಸ್ಥಾನದ ಪ್ರತಿಷ್ಠಾಪನೆಗೆ ಜನವರಿ 22ರ ದಿನಾಂಕವನ್ನು ಆಯ್ಕೆ ಮಾಡಲಾಗಿಲ್ಲ. ಬದಲಿಗೆ ಚುನಾವಣೆಗಳನ್ನು ಗಮನಿಸಿಕೊಂಡು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯ ರಾಜಕೀಯ ಪ್ರಚಾರಕ್ಕಾಗಿ ನಮ್ಮ ದೇವರು ಮತ್ತು ನಂಬಿಕೆಯೊಂದಿಗೆ ಆಟವಾಡುವುದನ್ನು ನಾವು ನೋಡಲಾಗುವುದಿಲ್ಲ. ದೇವಾಲಯದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು, ಆದರೆ ಅದರಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪವನ್ನು ಮಾಡುವುದನ್ನು ಯಾವುದೇ ಭಕ್ತರು ಸಹಿಸುವುದಿಲ್ಲ ಎಂದು ಪವನ್ ಖೇರಾ ಹೇಳಿದ್ದರು. ಮೋದಿ ರಾಮನ ಬೆರಳನ್ನು ಹಿಡಿದು ನಡೆಯುವ ಜಾಹೀರಾತಿನ ಬಗ್ಗೆ ಪ್ರಶ್ನಿಸಿದ ಅವರು, ಭಗವಾನ್ ರಾಮನಿಗೆ ಸಹಾಯ ಮಾಡಲು ನೀವು ಯಾರು, ನೀವು ದೇವರಿಗಿಂತ ಮೇಲಿದ್ದೀರಾ? ಎಂದು ಮೋದಿಗೆ ಖೇರಾ ಪ್ರಶ್ನಿಸಿದ್ದಾರೆ.