ಮಂಡ್ಯ ಜಿಲ್ಲೆಯಲ್ಲಿ 67ನೇ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ(U-19) ಪಂದ್ಯಾವಳಿ ಜನವರಿ 23 ರಿಂದ 27 ರವರೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 67ನೇ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ(U-19) ಪಂದ್ಯಾವಳಿಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
5 ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ(U-19) ಪಂದ್ಯಾವಳಿಗೆ ಹೊರ ರಾಜ್ಯದಿಂದ ಬರುವ ಆಟಗಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ 35 ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ 30 ರಿಂದ 35 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ತಂಡಕ್ಕೆ ಒಬ್ಬ ಜನರಲ್ ಮ್ಯಾನೇಜರ್ ಹಾಗೂ ಒಬ್ಬ ಕೋಚ್ ಇದ್ದು, ಅವರು ಕ್ರೀಡಾಪಟುಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರಬೇಕು. ರಾತ್ರಿ ಸಮಯದಲ್ಲಿ ಅವರಿಗೆ ಉತ್ತಮ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದರು.
ಭಾಗವಹಿಸುವ ಆಟಗಾರರಿಗೆ ಬಸ್ ವ್ಯವಸ್ಥೆ, ಆಹಾರ, ವಸತಿ, ಆಂಬುಲೆನ್ಸ್, ಮೆಡಿಕಲ್ ( 4 ವೈದ್ಯರು ಹಾಗೂ ನರ್ಸ್ ಒಳಗೊಂಡಂತೆ) ವ್ಯವಸ್ಥೆಗಳನ್ನು ಕಲ್ಪಿಸಿ ಅವರಿಗೆ ಯಾವುದೇ ಅಹಿತಕರ ಅನುಭವ ಆಗದಂತೆ ಎಚ್ಚರ ವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಚೆಲುವಯ್ಯ, ಉಪ ಪೊಲೀಸ್ ವರಿಷ್ಟಧಿಕಾರಿ ಲಕ್ಷ್ಮೀನಾರಾಯಣ, ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಅಧಿಕಾರಿ ಪರಮ ಶಿವಯ್ಯ, ನೊಡಲ್ ಅಧಿಕಾರಿ ಶಿವಪ್ಪ, ಮಂಡ್ಯ ಪದವಿ ಪೂರ್ವ ಶಾಲಾ ಶಿಕ್ಷಣ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬೈರೇಶ್, ಪದವಿ ಪೂರ್ವ ಶಾಲಾ ಶಿಕ್ಷಣ ಉಪನ್ಯಾಸಕ ಸಂಘದ ಅಧ್ಯಕ್ಷ ಚೆನ್ನಕೃಷ್ಣ, ಜಿಲ್ಲಾ ಕ್ರೀಡಾ ಸಂಯೋಜಕರು ಎಸ್.ಎಂ ಗುರುಸ್ವಾಮಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.