ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇಂದು ಮುಂಜಾನೆ ತೌಬಲ್ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಮೂವರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಗೆ ಬುಲೆಟ್ ಗಾಯಗಳಾಗಿವೆ. ಕಳೆದ ಮೇ.ತಿಂಗಳಿನಿಂದ ಹಿಂಸಾಚಾರಕ್ಕೆ ಸುದ್ದಿಯಾಗುತ್ತಿರುವ ಮಣಿಪುರ ಪದೇ ಪದೇ ಹಿಂಸಾಚಾರವನ್ನು ನೋಡುತ್ತಿದ್ದು, ಆಡಳಿತರೂಢ ಬಿಜೆಪಿ ಸರಕಾರ ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದನ್ನು ಗಮನಿಸಬಹುದು.
ನಿನ್ನೆ ಮೊರೆಹ್ನಲ್ಲಿ ನಡೆದ ಗುಂಡಿನ ದಾಳಿಗೆ ಇಬ್ಬರು ಪೊಲೀಸ್ ಕಮಾಂಡೋಗಳು ಮೃತಪಟ್ಟಿದ್ದರು, ಮೂವರು ಗಾಯಗೊಂಡಿದ್ದರು. ರಾಕೆಟ್ ಚಾಲಿತ ಗ್ರೆನೇಡ್ ದಾಳಿಯನ್ನು ನಡೆಸಲಾಗಿದ್ದು, ತೆಂಗೋಪಾಲ್ ಜಿಲ್ಲೆಯ ಸಂಘರ್ಷಪೀಡಿತ ಪಟ್ಟಣದಲ್ಲಿ ಹಲವು ಮನೆಗಳನ್ನು ಮತ್ತು ಶಾಲೆಗಳನ್ನು ಧ್ವಂಸ ಮಾಡಲಾಗಿದೆ.
ಪೊಲೀಸರ ಪ್ರಕಾರ, ಇಂದು ತೌಬಲ್ನ ಖಂಗಾಬೊಕ್ ಪ್ರದೇಶದಲ್ಲಿ 3ನೇ ರಿಸರ್ವ್ ಬೆಟಾಲಿಯನ್ನ ಕಾಂಪ್ಲೆಕ್ಸ್ನ್ ಗುರಿಯಾಗಿಸಿ ಗುಂಪು ದಾಳಿ ನಡೆಸಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಅಗತ್ಯ ಬಲ ಬಳಸಿ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ವು ತೌಬಲ್ ಪೊಲೀಸ್ ಪ್ರಧಾನ ಕಛೇರಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ಮಾಡಲಾಗಿದೆ. ಇದರ ಪರಿಣಾಮವಾಗಿ ಬಿಎಸ್ಎಫ್ನ ಮೂವರು ಸಿಬ್ಬಂದಿಗೆ ಬುಲೆಟ್ ಗಾಯಗಳಾಗಿವೆ ಎಂದು ಮಣಿಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಗೃಹ ಇಲಾಖೆ ಆಯುಕ್ತರಾದ ಟಿ ರಂಜಿತ್ ಸಿಂಗ್ ಅವರು ನಿನ್ನೆ ಗೃಹ ಸಚಿವಾಲಯಕ್ಕೆ ಪತ್ರ ಬರೆದು ತುರ್ತು ಅಗತ್ಯತೆಗಳನ್ನು ಉಲ್ಲೇಖಿಸಿ ಕನಿಷ್ಠ 7 ದಿನಗಳ ಕಾಲ ಇಂಫಾಲ್ನಲ್ಲಿ ಹೆಲಿಕಾಪ್ಟರ್ಗಳನ್ನು ಇರಿಸಲು ವಿನಂತಿಸಿದ್ದಾರೆ. ಗಡಿ ಪಟ್ಟಣವಾದ ಮೊರೆಹ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ಗಂಭೀರ ಕಾಳಜಿಯ ವಿಷಯವಾಗಿದೆ ಏಕೆಂದರೆ ನಿರಂತರ ಬಾಂಬ್ ದಾಳಿಗಳು ನಡೆಯುತ್ತಿವೆ. ಇದು ಇಂದು ಬೆಳಿಗ್ಗೆ ಒಬ್ಬ ಐಆರ್ಬಿ ಸಿಬ್ಬಂದಿಯ ಸಾವಿಗೆ ಕಾರಣವಾಗಿದೆ. ಪ್ರಚಲಿತ ಪರಿಸ್ಥಿತಿಯ ದೃಷ್ಟಿಯಿಂದ, ಮೊರೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಯಾವುದೇ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಉಂಟಾಗಬಹುದು. ಮೊರೆಹ್ ಪಟ್ಟಣಕ್ಕೆ ಭದ್ರತಾ ಸಿಬ್ಬಂದಿ, ಮದ್ದುಗುಂಡುಗಳು ಇತ್ಯಾದಿಗಳನ್ನು ಏರ್ಲಿಫ್ಟಿಂಗ್ ಮಾಡುವ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಹತ್ಯೆಯ ಸುದ್ದಿ ನಗರಕ್ಕೆ ತಲುಪುತ್ತಿದ್ದಂತೆ ರಾಜಧಾನಿ ಇಂಫಾಲ್ ಕೂಡ ಉದ್ವಿಗ್ನವಾಗಿತ್ತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಬುಧವಾರ ಬೀದಿಗಿಳಿದು ಮೊರೆಹ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡುವಂತೆ ಆಗ್ರಹಿಸಿದ್ದಾರೆ. ಮೊರೆಹ್ನಲ್ಲಿ ಪೊಲೀಸರ ವಿರುದ್ಧದ ದಾಳಿಯಲ್ಲಿ ಮ್ಯಾನ್ಮಾರ್ ಪ್ರಜೆಗಳು ಭಾಗಿಯಾಗಿದ್ದಾರೆ ಎಂದು ಮೈತೈ ನಾಗರಿಕ ಸಮಾಜದ ಗುಂಪುಗಳು ಆರೋಪಿಸಿದೆ. ಪಟ್ಟಣದಲ್ಲಿ ಪದೇ ಪದೇ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತಡೆಯುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲ ಪ್ರತಿಭಟನಾಕಾರರು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ರಾಜ್ಯಪಾಲರಾದ ಅನುಸೂಯಾ ಉಕ್ಲಿ ಅವರ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ.
2023ರ ಮೇ ತಿಂಗಳ ಆರಂಭದಿಂದ ಮಣಿಪುರದಲ್ಲಿ ಜನಾಂಗೀಯ ಕಲಹ ನಡೆಯುತ್ತಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೈತೈ ಹಾಗೂ ಕುಕಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದುವರೆಗೆ ಹಿಂಸಾಚಾರಕ್ಕೆ 200ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಎರಡೂ ಸಮುದಾಯಗಳಿಗೆ ಸೇರಿದ 60 ಸಾವಿರಕ್ಕೂ ಹೆಚ್ಚು ನಾಗರಿಕರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೈತೈ ಮತ್ತು ಕುಕಿ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮೈತೈ ಸಮುದಾಯದ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಇದಲ್ಲದೆ ಮಣಿಪುರ ಗಡಿಭಾಗದ ಮೊರೆಹ್ ಪಟ್ಟಣದಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ಸಶಸ್ತ್ರದಾರಿ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದರು. ಡಿ.4ರಂದು ತೆಂಗೊಪಾಲ್ ಜಿಲ್ಲೆಯ ಲೀತು ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದೆ.