ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿಯೊಬ್ಬ ರೈತನ ಜೀವನ ಕಟ್ಟಿಕೊಡುವ ಯೋಜನೆ ಸಾಕಾರಗೊಳಿಸಲು ರೈತರ ಸ್ಪಂದನೆ ಅಗತ್ಯ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.
ಮಳವಳ್ಳಿ ತಾಲ್ಲೂಕಿನ ಬಿಜಿಪುರ ವ್ಯಾಪ್ತಿಯಲ್ಲಿ ಹನಿ ನೀರಾವರಿ ಯೋಜನೆಯಡಿ ಬೆಳೆದಿರುವ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಹನಿ ನೀರಾವರಿ ಪದ್ಧತಿಯಲ್ಲಿ ತಕ್ಷಣದ ಆದಾಯ, ಮಾಧ್ಯಮ ಆದಾಯ ಹಾಗೂ ದೀರ್ಘಾವಧಿಯ ಆದಾಯವನ್ನು ಕಾಣಬಹುದಾಗಿದೆ. ಇಂಥ ಯೋಜನೆಯಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ ಆರ್ಥಿಕ ಹಾಗೂ ಶೈಕ್ಷಣಿಕ ಬದುಕು ನಿರ್ಮಿಸಿಕೊಳ್ಳಬಹು ದಾಗಿದೆ, ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ದೇಶದ ನಾನಾ ಜನರು ಮಳವಳ್ಳಿಯತ್ತ ಮುಖ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಅತಿಯಾದ ನೀರಿನ ಬಳಕೆ ಹಾಗೂ ಹೆಚ್ಚಿನ ರಾಸಾಯನಿಕ ಬಳಕೆಯಿಂದ ಭೂಮಿ ಮಂಡ್ಯ ಜಿಲ್ಲೆಯಲ್ಲಿ ಸತ್ವವನ್ನು ಕಳೆದುಕೊಳ್ಳುತ್ತಿದೆ, ಕೃಷಿಯಲ್ಲಿ ಹೆಚ್ಚಿನ ಕ್ರಿಮಿನಾಶಕಗಳನ್ನು ಬಳಸುತ್ತಿದ್ದು, ವಿಷಯುಕ್ತ ಆಹಾರವನ್ನು ಪ್ರತಿನಿತ್ಯ ಸೇವಿಸುತ್ತಿರುವುದರಿಂ ದ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ, ಭೂಮಿ ಹಾಗೂ ಮನುಷ್ಯರ ಆರೋಗ್ಯದ ದೃಷ್ಠಿಯಿಂದ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮಳೆಯಾಶ್ರಿತ ಪ್ರದೇಶಕ್ಕೆ ನೀರಿನ ಸಂಪರ್ಕ ಕಲ್ಪಿಸಿ ಹನಿ ನೀರಾವರಿಯ ಮೂಲಕ ಹಸಿರು ಪ್ರದೇಶವನ್ನಾಗಿ ಮಾಡಬೇಕೆಂಬ ಆಕಾಂಕ್ಷೆಯೊಂದಿಗೆ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದೇನೆ, ಕಾಮಗಾರಿ ಅಂತಿಮ ಘಟ್ಟಕ್ಕೆ ಬಂದಿದೆ, ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮ, ತೋಟಗಾರಿಕೆ,ಕೃಷಿ ಇಲಾಖೆ ಹಾಗೂ ಜೈನ್ ರ್ರೀಗೇಷನ್ ಸಂಸ್ಥೆಯ ವತಿಯಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸರ್ಕಾರದಿಂದ 593 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪೂರಿಗಾಲಿ ಹನಿ ತುಂತುರು ನೀರಾವರಿ ಯೋಜನೆ ಸಫಲತೆ ಕಾಣಬೇಕು, ರೈತರ ಬದುಕು ಹಸನಾಗಬೇಕು, ಬಿಜಿಪುರ ಹೋಬಳಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಮಾದರಿಯಾಗಬೇಕೆಂಬುವುದು ನನ್ನ ಕನಸ್ಸಾಗಿದ್ದು, ರೈತರು ಸಹಕಾರ ನೀಡುವುದರ ಮೂಲಕ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಇಂಜಿನಿಯರ್ ಹಿತೇಶ್ ಕುಮಾರ್ ಮಾತನಾಡಿ, ಹನಿ ನೀರಾವರಿ ಯೋಜನೆಯು ರೈತರಿಗೆ ವರದಾನವಾಗಿದೆ, ನಾನೂ ಕೂಡ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದು, ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆಯುತ್ತಿದ್ದು, ಪ್ರತಿದಿನ 400 ಕೆ.ಜಿ ಸಾವಯವ ಬೆಲ್ಲ ತಯಾರು ಮಾಡಿ ಮಾರಾಟ ಮಾಡುವುದರ ಮೂಲಕ ಉತ್ತಮ ಲಾಭಗಳಿಸುತ್ತಿದ್ದೇನೆ, ರೈತರು ಸಾವಯವದಲ್ಲಿ ಬೆಳೆದ ಬೆಳೆಯನ್ನು ಸೇವನೆ ಮಾಡಿದರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ, ಹನಿ ನೀರಾವರಿ ಯೋಜನೆಯನ್ನು ರೈತರು ಒಗ್ಗಟ್ಟಿನಿಂದ ಸದ್ಬಳಕೆ ಮಾಡಿಕೊಂಡರೆ ಭವಿಷ್ಯತ್ನಲ್ಲಿ ರೈತರ ಬದುಕು ಹಸನಾಗಲಿದೆ ಎಂದರು. ನಂತರ ಸಾವಯವ ಬೆಲ್ಲ ತಯಾರು ಘಟಕಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಸಾವಯವ ಕೃಷಿ ವಿಜ್ಞಾನಿ ಪ್ರಕಾಶ್, ಸಹಾಯ ನಿರ್ದೇಶಕ ಪಿ.ಎಎಸ್ ದೀಪಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಾಂತರಾಜು ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.