ಮೇಲುಕೋಟೆಯ ಪ್ರಸಿದ್ದ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿಯೊಬ್ಬರನ್ನು ಕೊಲೆ ಮಾಡಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಮೇಲುಕೋಟೆ ಎಸ್ಇಟಿ ಶಾಲೆಯ ಶಿಕ್ಷಕಿ ಹಾಗೂ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿಯ ಲೋಕೇಶ್ ಎಂಬವರ ಪತ್ನಿ ದೀಪಿಕಾ (35) ಕೊಲೆಯಾದ ಶಿಕ್ಷಕಿ.
ಕಳೆದ ಜ.20ರಂದು ಮೇಲುಕೋಟೆ ಎಸ್ಇಟಿ ಶಾಲೆ ಹೋಗಿದ್ದ ದೀಪಿಕಾ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದಾಗಿ ಆಕೆಯ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಸ್ಕೂಟರ್ ಅವರ ಸ್ಕೂಟರ್ ಕಂಡು ಬಂತು. ಕೊಲೆ ಮಾಡಿದ ದುರುಳರು ಗುಂಡಿ ತೆಗೆದು ಆಕೆಯನ್ನು ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಆಕೆಯ ಮೃತದೇಹವನ್ನು ಹೊರತೆಗೆದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಜ.20ರಂದೇ ಗಲಾಟೆ ನಡೆದಿತ್ತು
ಜ.20 ಮಧ್ಯಾಹ್ನ ಬೆಟ್ಟದ ತಪ್ಪಲಿನಲ್ಲಿ ಇಬ್ಬರು ಕಿಡಿಗೇಡಿಗಳೊಂದಿಗೆ ಆಕೆ ಜಗಳ ನಡೆಸುತ್ತಿರುವ 10 ಸೆಕೆಂಡ್ ಗಳ ದೃಶ್ಯವನ್ನು ಅಲ್ಲಿಗೆ ಬಂದಿದ್ದ, ಪ್ರವಾಸಿಗರೊಬ್ಬರು ಚಿತ್ರಿಕರಿಸಿದ್ದು, ಇದು ಪೊಲೀಸರಿಗೆ ಲಭ್ಯವಾಗಿದ್ದು, ಇದರ ಆಧಾರದ ಮೇಲೆ ಕೊಲೆಗಾರ ಪತ್ತೆಗೆ ಪೊಲೀಸರು ಬಲೆ ಬೀಸಿದ್ಧಾರೆ.
ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಶ್ರೇಯಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ಧಾರೆ.