ಗಜಾನನ ಅಂಡ್ ಗ್ಯಾಂಗ್ ನೈಜತೆಗೆ ಹತ್ತಿರವಾದ ಘಟನೆಗಳಿಂದ ಹೆಣೆಯಲಾದ ಭಾವನಾತ್ಮಕ ಚಿತ್ರ ಎಂದು ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬೃಂದಾವನ ಎಂಟರ್ ಪ್ರೈಸಸ್ ಹೊರತರುತ್ತಿರುವ ಗಜಾನನ ಅಂಡ್ ಗ್ಯಾಂಗ್ ಚಿತ್ರ ಜೂ.3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದರು.
ಗಜಾನನ ಅಂಡ್ ಗ್ಯಾಂಗ್ ಕಾಲೇಜು ವಿದ್ಯಾರ್ಥಿಗಳ ಚಿತ್ರವಾಗಿದ್ದು,ತುಂಬಾ ಉತ್ತಮವಾಗಿ ಮೂಡಿಬಂದಿದೆ. ಕಾಲೇಜು ವಿದ್ಯಾರ್ಥಿಗಳ ಜೀವನದಲ್ಲಿ ಬರುವ ಕಷ್ಟ-ಸುಖಗಳನ್ನು ತೆರೆದಿಡುವ ಉತ್ತಮ ಸದಭಿರುಚಿಯ ಚಿತ್ರವಾಗಿದ್ದು, ಮನೆ ಮಂದಿಯೆಲ್ಲ ಬಂದು ನೋಡಬಹುದು ಎಂದರು.
ಈ ಚಿತ್ರವನ್ನು ಬೆಂಗಳೂರು, ತೀರ್ಥಹಳ್ಳಿ ಹಾಗೂ ಆಗುಂಬೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರಿಕರಿಸಲಾಗಿದ್ದು, ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಪೋಷಕರಿಗೆ ಉತ್ತಮ ಸಂದೇಶ ನೀಡುವುದು ಈ ಚಿತ್ರದ ಉದ್ದೇಶವಾಗಿದೆ ಎಂದರು.
ಚಿತ್ರದಲ್ಲಿರುವ ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ಇದರಲ್ಲಿ ಪ್ರಮುಖವೆಂದರೆ ದಿ.ಪುನೀತ್ರಾಜ್ಕುಮಾರ್ರವರು ತಮ್ಮ 101ನೇ ಹಾಡನ್ನು ಹಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಹೇಳಿದರು.
ನಾಗೇಶ್ ಕುಮಾರ್ ನಿರ್ಮಾಪಕರಾಗಿ ಉತ್ತಮವಾದ ಸಹಕಾರ ನೀಡಿದ್ದು, ಪ್ರದ್ಯೋತನ್ ಉತ್ತಮ ಸಂಗೀತ ನೀಡಿದ್ದಾರೆ. ಉದಯ್ಲೀಲಾ ಛಾಯಾಗ್ರಹಣ, ವಿಜೇರ್ಚಂದ್ರ ಸಂಕಲನ, ಡಾ.ಥ್ರಿಲ್ಲರ್ ಮಂಜು ಸಾಹಸದಲ್ಲಿ ಈ ಚಿತ್ರ ಮೂಡಿಬಂದಿದೆ ಎಂದು ಹೇಳಿದರು.
ನಾಯಕ ನಟ ಶ್ರೀ ಮಾತನಾಡಿ, ಇರುವುದೆಲ್ಲವ ಬಿಟ್ಟು ಚಿತ್ರದ ನಂತರ ಗಜಾನನ ಅಂಡ್ ಗ್ಯಾಂಗ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದ್ದು, ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ತೆರಳಿ ನೋಡುವ ಮುಖಾಂತರ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ನಟಿಯರಾದ ಅಶ್ವಿನಿ, ಹರ್ಷಿತಾ ಉಪಸ್ಥಿತರಿದ್ದರು.