ಬಸವಣ್ಣನವರ ಸಮಕಾಲೀನರವರಾದ ಮಡಿವಾಳ ಮಾಚಿದೇವರು 12 ನೇ ಶತಮಾನದ ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ವಚನದ ಮೂಲಕ ಅರಿವು ಮೂಡಿಸಿದರು. ಆಗಾಗಿ ಎಲ್ಲಾ ಜನಸಾಮಾನ್ಯರು ಮಡಿವಾಳ ಮಾಚಿದೇವರ ಬಗ್ಗೆ ಅರಿತು ಅವರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕು ಎಂದು ಜಿ.ಪಂ. ಸಹಾಯಕ ಕಾರ್ಯದರ್ಶಿ ರವೀಂದ್ರ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗಾಂಧಿಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶ್ರೇಷ್ಠ ವಚನಕಾರರ ಜಯಂತಿಗಳನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತೋಷದ ವಿಷಯವಾಗಿದೆ. ವಚನಕಾರರ ವಚನಗಳು ಪ್ರಸ್ತುತ ಸಮಾಜದಲ್ಲಿ ಜನ ಸಾಮಾನ್ಯರ ಧ್ವನಿಯಾಗಿದೆ ಎಂದರು.
ಮಡಿವಾಳ ಮಾಚಿದೇವರು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಅವರ ವಚನಗಳು ಅಂದಿನ ಸಮಾಜದ ಎಲ್ಲಾ ಶೋಷಿತ ವರ್ಗದ ಪರವಾಗಿದ್ದವು. ಅವರ ಸಾಮಾಜಿಕ ಚಿಂತನೆಗಳು ಇಂದಿನ ಯುವಕರಿಗೆ ಮಾದರಿಯಾಗಲಿ ಎಂದು ಹೇಳಿದರು.
ಪ್ರಜಾಸತ್ಯ ಪತ್ರಿಕೆ ಸಂಪಾದಕರಾದ ದ.ಕೋ.ಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ ಮಡಿವಾಳ ಮಾಚಿದೇವರು ಸಮಾಜದ ಬಗ್ಗೆ ಅಧ್ಯಯನ ನಡೆಸಿ 354 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. 12 ನೇ ಶತಮಾನದ ಸಮಾಜದ ದುರ್ಬಲರು, ಶೋಷಿತರು, ಶಿಕ್ಷಣ ವಂಚಿತರ ಬಗ್ಗೆ ತಮ್ಮ ವಚನದಲ್ಲಿ ತಿಳಿಸಿದ್ದಾರೆ ಎಂದರು.
ಮಾಡಿವಾಳ ಮಾಚೀದೇವರು ಶರಣರ ಬಟ್ಟೆಗಳನ್ನು ಶುಚಿಮಾಡುವುದನ್ನು ತಮ್ಮ ಕಾಯಕವಾಗಿ ಸ್ವೀಕರಿಸಿದ್ದರು. ಜೊತೆಗೆ ಸಮಾಜದಲ್ಲಿದ್ದ ಮೌಡ್ಯಗಳನ್ನು ಶುಚಿಮಾಡುವ ಕಾಯಕದಲ್ಲಿ ತೊಡಗಿದ್ದರು. ಕಾಯಕದಲ್ಲಿ ಯಾವುದೇ ಕೀಳರಿಮೆ ಭಾವನೆಯಿಲ್ಲದೆ, ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆಯಿಂದ ಮಾಡುತ್ತಿದ್ದರು ಎಂದರು.
ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತೀ ಮಹತ್ವದಾಗಿದ್ದು, ಸಮಾಜದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರೆಗೆ ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದ್ದಾಗಿತ್ತು. ಆಗಾಗಿ ಇಂದಿನ ಸಮಾಜವು ಮಾಚಿದೇವರ ಸಾಧನೆ, ಕೊಡುಗೆ, ಮಹತ್ವವನ್ನು ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯಕುಮಾರ್, ನಗರಸಭೆ ಸದಸ್ಯ ನಾಗೇಶ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.