ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರ್ ಸಾವನ್ನಪ್ಪಿದ್ದು, ಆತನ ಪತ್ನಿ ಮತ್ತವರ ಮನೆಯವರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿರುವ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಾಂಡವಪುರ ಪಟ್ಟಣದ ಶಾಂತಿನಗರದ ನಿವಾಸಿ ಗಂಗಾಧರ್(42) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ.
ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಗಂಗಾಧರ್ ಅವರ ದಾಂಪತ್ಯದಲ್ಲಿ ಬಿರುಕುಂಟಾಗಿ, ಕೋರ್ಟ್ ಮೆಟ್ಟಿಲೇರಿ ಬಳಿಕ ಎರಡೂ ಮನೆಯವರ ಪೋಷಕರ ಮಾತಿನಂತೆ ರಾಜಿಯಾಗಿದ್ದರು. ಕಳೆದ ಆರು ತಿಂಗಳಿಂದ ಗಂಗಾಧರ್, ಪತ್ನಿ ಭವ್ಯ, ಮಗಳು ಸೋನಾಲ್ ಜತೆಯಲ್ಲಿಯೇ ಇದ್ದರು ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಗಂಗಾಧರ್ ಅವರಿ ಬಾತ್ ರೂಮ್ ನಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಭವ್ಯ, ಪತಿ ಗಂಗಾಧರ್ ಅವರ ತಾಯಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಮನೆಗೆ ಬಂದ ಗಂಗಾಧರ್ ತಾಯಿ ಸರಸ್ವತಿ ಅವರು ಆಸ್ಪತ್ರೆಗೆ ತೆಗೆದುಕೊಂಡು ಬರುವಷ್ಟರಲ್ಲಿ ಗಂಗಾಧರ್ ಸಾವಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಚಿವರ ಒತ್ತಡ
ಮೃತ ಗಂಗಾಧರ್ ಪತ್ನಿ ಭವ್ಯ ಅವರ ತಂದೆ ಸಚಿವ ಚಲುವರಾಯಸ್ವಾಮಿ ಬೆಂಬಲಿಗ ಎಂಬ ಕಾರಣದಿಂದ ಕೊಲೆ ಪ್ರಕರಣದ ದಾಖಲಿಸದಂತೆ ಪೊಲೀಸರಿಗೆ ಒತ್ತಡ ತಂದಿದ್ದಾರೆ. ಹಾಗಾಗಿ ಪೊಲೀಸರು ಪ್ರಕರಣ ಮುಚ್ಚುಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಗಂಗಾಧರ್ ಪೋಷಕರು ಆರೋಪಿಸಿದ್ದಾರೆ.
ಮೃತ ಗಂಗಾಧರ್ ಪತ್ನಿ ಭವ್ಯ ಅವರ ಮನೆಯವರು ಸೇರಿ ಕೊಲೆ ಮಾಡಿದ್ದು, ಅವರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ, ಬಂಧಿಸುವಂತೆ ಮೃತ ಗಂಗಾಧರ್ ಅವರ ತಾಯಿ ಸರಸ್ವತಿ, ಸೋದರರಾದ ಶಶಿಧರ್, ಗಿರಿಧರ್ ಒತ್ತಾಯಿಸಿದ್ದಾರೆ. ಮೊದಲು ಕೊಲೆ ಪ್ರಕರಣ ದಾಖಲಿಸಿ ಬಳಿಕ ವಿಡಿಯೋ ಚಿತ್ರೀಕರಣ ಮಾಡಿ ಶವ ಪರೀಕ್ಷೆ ನಡೆಸಲಿ ಎಂದು ಗಂಗಾಧರ್ ಅವರ ಪೋಷಕರು ಪಟ್ಟು ಹಿಡಿದಿದ್ದಾರೆ.