ಬದಲಾದ ಕೃಷಿ ಪದ್ಧತಿ,ಬದಲಾದ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿಯಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ಹೇಳಿದರು.
ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ರಂಗನಾಥ್ ನಗರದ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ “ಕ್ಯಾನ್ಸರ್ ಜಾಗೃತಿ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿವರ್ಷ 10 ಲಕ್ಷ ಜನರು ಹೊಸದಾಗಿ ಕ್ಯಾನ್ಸರ್ ರೋಗಿಗಳ ಸಾಲಿಗೆ ಸೇರುತ್ತಿದ್ದಾರೆ ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ ಕೆಲವೊಂದು ರೋಗ ವೈದ್ಯ ಲೋಕಕ್ಕೆ ಸವಾಲಾಗಿವೆ ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಆಹಾರ ಕ್ರಮದ ಬದಲಾವಣೆ,ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಹಾಗೂ ಮಾನಸಿಕ ಒತ್ತಡದಿಂದ ರೋಗಗಳು ಹೆಚ್ಚುತ್ತಿವೆ ಆದ್ದರಿಂದ ತಂಬಾಕು, ಮದ್ಯಪಾನದಿಂದ ದೂರವಿರುವುದು ಒಳ್ಳೆಯದು ಎಂದರು.
ಶಿಸ್ತು ಬದ್ಧ ಜೀವನಶೈಲಿ, ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಶುಚಿತ್ವ, ಆರೋಗ್ಯಕರ ಅಭ್ಯಾಸ, ಪ್ರತಿನಿತ್ಯ ವ್ಯಾಯಾಮ, ದೈಹಿಕವಾಗಿ ಸದಾ ಚಟುವಟಿಕೆಯಿಂದ ಇದ್ದರೆ ಇಂಥ ರೋಗಗಳಿಂದ ದೂರ ಇರಬಹುದೆಂದು ಕಿವಿ ಮಾತು ಹೇಳಿದರು.
ಹೆಂಗಸರಲ್ಲಿ ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ, ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣಮುಖವಾಗಬಹುದು ಕ್ಯಾನ್ಸರ್ ಗೆ ಭಯಪಡುವ ಅವಶ್ಯಕತೆ ಇಲ್ಲ. ಆದರೆ ನಿರಂತರ ವೈದ್ಯಕೀಯ ತಪಾಸಣೆ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ತಾಯಿಂದಿರಾದ ಮೇಘನಾ, ಕವಿತಾ, ರೇಣುಕಮ್ಮ, ಮಧುಶಾಲಿನಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಸುಂದರಿ, ಸಹಾಯಕಿಯರಾದ ಮಂಜುಳಾ, ಕಮಲಮ್ಮ ಇತರರು ಹಾಜರಿದ್ದರು