ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥಸ್ವಾಮಿ ಅವರ ಪೋನ್ ಟ್ಯಾಪ್ ಮಾಡಲಾಯ್ತು, ಒಂದು ಧರ್ಮ ಪೀಠಕ್ಕೆ ಇದಕ್ಕಿಂತ ಅಪಮಾನಬೇಕಾ ? ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಎರಡನೇ ಮಠ ಮಾಡಿದ್ದು ಯಾರು ? ಜ್ವರ ಬಂದಾಗ ಡಾಕ್ಟರ್ ಬಳಿ ಹೋಗದು ಸಹಜ, ಈಗ ಚುನಾವಣೆ ಬಂತು ಅಂತ ಸ್ವಾಮೀಜಿ ಬಳಿ ಹೋಗ್ತಿದ್ದಾರೆ ಅಷ್ಟೆ ಎಂದು ತಿರುಗೇಟು ನೀಡಿದ ಅವರು, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನ ಜಾರಿಗೆ ತಂದಾಗ, ಇದೇ ಕುಮಾರಸ್ವಾಮಿ ಸರ್ಕಾರ ಕೈ ಎತ್ತಿ ಜೈ ಅನ್ನಲಿಲ್ಲವೇ ? ಎಂದು ಕುಟುಕಿದರು.
ಸ್ಟಾರ್ ಚಂದ್ರು ಇಲ್ಲೇ ಹುಟ್ಟಿ ಬೆಳೆದವರು
ಚುಂಚನಗಿರಿ ಶ್ರೀಗಳನ್ನ ನಾವೂ ಭೇಟಿ ಮಾಡಿದ್ದೀವಿ. ನಾವೇ ಮೊದಲು ಅವರನ್ನ ಭೇಟಿ ಮಾಡಿದ್ದೆವು. ಸ್ಟಾರ್ ಚಂದ್ರು ಇಲ್ಲೇ ಹುಟ್ಟಿ ಬೆಳೆದವರು. ಚುನಾವಣೆ ಬಂದಾಗ ಎಲ್ಲಾ ಮಠಗಳಿಗೆ ಎಲ್ಲರೂ ಹೋಗಿ ಆಶೀರ್ವಾದ ಪಡೆದುಕೊಳ್ಳೋದು ಸರ್ವೆ ಸಾಮಾನ್ಯ. ಎಸ್ ಎಂ ಕೃಷ್ಣರನ್ನ ಅವರು ಭೇಟಿ ಮಾಡಿದ್ದಾರೆ. ಆದ್ರೆ 2004 ರಲ್ಲಿ ಇದೇ ಎಸ್ ಎಂ ಕೃಷ್ಣ ಅವರಿಗೆ ಬಹುಮತ ಸಿಗದಿದ್ದಾಗ ಜೆಡಿಎಸ್ ನವರು ಏನ್ ಮಾಡಿದ್ರು ? ಆಗ ನಾನೂ ಅಲ್ಲೇ ಇದ್ದೆ, ಇದೇ ಜಿಲ್ಲೆಯ ಒಬ್ಬರ ಒಕ್ಕಲಿಗನನ್ನ ಮತ್ತೆ ಸಿ ಎಂ ಮಾಡುವ ಅವಕಾಶ ಜೆಡಿಎಸ್ ಗೆ ಇತ್ತು.
ಎರಡನೇ ಅವಕಾಶ ಖರ್ಗೆಗೆ ಕೇಳಲಾಗಿತ್ತು, ಆದ್ರೆ ಮೂರನೇ ಬಾರಿ ಅವರು ಹೇಳಿದಂಗೆ ಕೇಳಬೇಕು ಎನ್ನುವಂತೆ ಧರ್ಮಸಿಂಗ್ ಅವರನ್ನ ಸಿ ಎಂ ಮಾಡಲಾಯ್ತು ಎಂದು ಜೆಡಿಎಸ್ ವಿರುದ್ದ ಹರಿಹಾಯ್ದರು.