ಮಂಡ್ಯ ಜಿಲ್ಲೆ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಾಗಮಂಗಲ ಕ್ಷೇತ್ರದ ನಲ್ಲಿಗೆರೆ ಬಾಲು ಸ್ಥಾನದಿಂದ ತೆರವಾದ ಸ್ಥಾನಕ್ಕೆ ನಾಗಮಂಗಲ ತಾಲೂಕಿನ ಸುಖದರೆ ಗ್ರಾಮದ ಎಸ್ ಎನ್ ಲಕ್ಷ್ಮೀನಾರಾಯಣ್ ಅವರನ್ನು ನೂತನ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ
ಮನಮುಲ್ ನಿರ್ದೇಶಕ ಸ್ಥಾನಕ್ಕೆ ಈ ಹಿಂದೆ ನಲ್ಲಿಗೆರೆ ಬಾಲು ವಿರುದ್ಧ ಸ್ಪರ್ಧಿಸಿದ್ದ ಸುಖಧರೆ ಗ್ರಾಮದ ಲಕ್ಷ್ಮಿ ನಾರಾಯಣ್, ಎರಡು ಮತಗಳ ಅಂತರದಿಂದ ಸೋಲು ಕಂಡಿದ್ದರು. ಆನಂತರ ಹಲವಾರು ನ್ಯೂನ್ಯತೆಗಳನ್ನು ಕುರಿತು ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು, ಅಂತಿಮ ತೀರ್ಪಿನಂತೆ ನಿರ್ದೇಶಕ ಸ್ಥಾನದಿಂದ ನೆಲ್ಲಿಗೆರೆ ಬಾಲು ರವರು ಅನುರ್ಜಿತಗೊಂಡ ಹಿನ್ನೆಲೆಯಲ್ಲಿ ಕಡಿಮೆ ಅಂತರದಿಂದ ಸೋಲುಂಡಿದ್ದ ಲಕ್ಷ್ಮೀನಾರಾಯಣ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳ ಸಂಭ್ರಮ
ಮಂಡ್ಯ ಹಾಲು ಒಕ್ಕೂಟಕ್ಕೆ ನೂತನ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆ ಬೋಗಾದಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಲಕ್ಷ್ಮೀನಾರಾಯಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು.
ನೂತನ ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದೆ, ಆದರೆ ಇಂದು ಜಯ ಸಿಕ್ಕಿದೆ. ನೂತನ ನಿರ್ದೇಶಕನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೃಷಿ ಮಂತ್ರಿ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆ ಮತ್ತು ನಾಗಮಂಗಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದರು.