ಇನ್ನೊಂದು ವಾರದಲ್ಲಿ ನಾಲೆಗಳಿಗೆ ನೀರು ಹರಿಸಿ,ಬೆಳೆಗಳ ರಕ್ಷಣೆ ಮಾಡದಿದ್ದರೆ ರೈತರ ಜೊತೆಗೂಡಿ ಜಿಲ್ಲಾಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ಕೃತಕ ಬರಗಾಲ ಸೃಷ್ಟಿ ಮಾಡಿದೆ.ಈ ಹಿಂದೆ ಕೃಷ್ಣರಾಜ ಸಾಗರ ಜಲಾಶಯದಲ್ಲಿ 60 ಅಡಿ ನೀರಿದ್ದಾಗಲೆ ಕಬ್ಬು, ಭತ್ತ, ತೆಂಗು, ತೋಟಗಾರಿಕೆ ಬೆಳೆಗಳಿಗೆ ನೀರು ಕೊಡಲಾಗಿತ್ತು.
ಆದರೆ ನೀರಾವರಿ ಇಲಾಖೆ ಅಧಿಕಾರಿಗಳು, ಸರ್ಕಾರ ರೈತರಿಗೆ ನೀರು ಕೊಡದೆ ಬೇಜಾವಬ್ದಾರಿ ತೋರುತ್ತಿದೆ. ಇನ್ನೊಂದು ವಾರದೊಳಗೆ ಕಟ್ಟು ಪದ್ದತಿಯಲ್ಲಿ ನೀರು ಕೊಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ಗೆ ಭಯ
ನಾನು ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಕೋರಿದ ಪೋಟೋವನ್ನು ಕಾಂಗ್ರೆಸ್ ನಾಯಕರು ವೈರಲ್ ಮಾಡಿದ್ದಾರೆ.
ನಾನು ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ನಿಖಿಲ್ ಕುಮಾರಸ್ವಾಮಿ ಅವರ ಚುನಾವಣೆಯಲ್ಲಿ ಜೊತೆಗೆ ಕೆಲಸ ಮಾಡಿದ್ದೇವೆ.ಡಿ.ಕೆ.ಶಿವಕುಮಾರ್ ಅವರಿಗೆ ನಾನು ಎರಡು ವರ್ಷಗಳ ಹಿಂದೆ ಶುಭ ಕೋರಿದ ಪೋಟೋ ವೈರಲ್ ಮಾಡಿರುವುದನ್ನು ನೋಡಿದರೆ, ಅವರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಎಂತಹ ಭಯ ಕಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಪುಟ್ಟರಾಜು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಅತ್ಯಂತ ಪ್ರಚಂಡ ಬಹುಮತದಲ್ಲಿ ಆಯ್ಕೆಯಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬೆಂಬಲಿಸುವ ಕೆಲಸವನ್ನು ರಾಜ್ಯದ 28 ಕ್ಷೇತ್ರಗಳಲ್ಲಿ ಮತದಾರರು ಮಾಡಲಿದ್ದಾರೆ ಎಂದರು.