”ರೈತರಿಗೆ ಇನ್ನೊಬ್ಬರಿಗೆ ಅನ್ನ ನೀಡಿ ಗೊತ್ತಿದೆ, ಪ್ರಾಣ ಉಳಿಸಿ ಗೊತ್ತಿದೆ, ಆದರೆ, ಸರ್ಕಾರ ಬಡವರ ತಟ್ಟೆಯ ಅನ್ನವನ್ನು ಕಸಿದುಕೊಳ್ಳುತ್ತಿದೆ” ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಂಚಾಲಕಿ ಪೂರ್ಣಿಮಾ ಕಿಡಿಕಾರಿದರು.
ರೈತಸಂಘದ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಾಜಕಾರಣಿಗಳು ಹೋರಾಟದ ಸ್ಥಳಕ್ಕೆ ಬಂದು, ತಮ್ಮ ಪರ ಹೋರಾಟ ನಡೆಸುವ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಆದರೆ ನಿಜವಾಗಿ ಯಾವ ರಾಜಕೀಯ ಪಕ್ಷಗಳು ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಮುಂದಿನ ಚುನಾವಣೆಯಲ್ಲಿ ನಿಮ್ಮ ಮನೆಗೆ ಓಟು ಕೇಳಿಕೊಂಡು ಬರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿ, ನೀವು ಹಣ, ಹೆಂಡ, ಮಾಂಸಕ್ಕೋಸ್ಕರ ಮತವನ್ನು ಮಾರಾಟ ಮಾಡಿಕೊಂಡರೇ, ನಾವು ಮತ್ತೇ ಬೀದಿಯಲ್ಲಿ ಬಂದು ಇದೇ ರೀತಿ ಹೋರಾಟ ಮಾಡಬೇಕಾಗುತ್ತದೆ, ಆದ್ದರಿಂದ ಚುನಾವಣೆಯಲ್ಲಿ ಯೋಗ್ಯರನ್ನು ಬೆಂಬಲಿಸಿ ಎಂದು ಕರೆ ನೀಡಿದರು.