ಜಿಲ್ಲೆಯ ಪರಿಶಿಷ್ಟ ಸಮುದಾಯದ ಮುಖಂಡರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ,ಅವರು ಉನ್ನತ ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ಹಿರಿಯ ದಲಿತ ನಾಯಕ ಗುರುಪ್ರಸಾದ್ ಕೆರಗೋಡು ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಡಿ.ಜಯರಾಮ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಸಮುದಾಯದವರಿಗೆ ಅಧಿಕಾರ ಸಿಕ್ಕಿದೆ. ಆದರೆ ವಿಧಾನಪರಿಷತ್, ನಿಗಮ ಮಂಡಳಿಗಳಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ದೊರಕಿಲ್ಲ.ಉನ್ನತ ಅಧಿಕಾರದಿಂದ ಪರಿಶಿಷ್ಟ ಸಮುದಾಯದ ನಾಯಕರು ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯ ಸಾಂಪ್ರದಾಯಿಕವಾಗಿ ಮತ ನೀಡುತ್ತಲೇ ಬಂದಿದ್ದಾರೆ,ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಈಗಲಾದರೂ ಪರಿಶಿಷ್ಟ ಸಮುದಾಯದ ನಾಯಕರನ್ನು ಗುರುತಿಸಿ ಅವರಿಗೆ ಉನ್ನತ ಸ್ಥಾನಮಾನ ನೀಡಬೇಕು ಎಂದರು.
ಎಂ.ಡಿ ಜಯರಾಮ್ ಸೇರಿದಂತೆ ಹಲವು ಮುಖಂಡರು ಸುದೀರ್ಘ ಕಾಲ ರಾಜಕಾರಣ ಮಾಡಿದರೂ ಸ್ಥಳೀಯ ಸಂಸ್ಥೆಗಳ ಅಧಿಕಾರಕ್ಕೆ ಮಾತ್ರ ಸೀಮಿತರಾದರು.ಅವರಿಗೆ ರಾಜ್ಯಮಟ್ಟದ ಅಧಿಕಾರ ದಕ್ಕಲೇ ಇಲ್ಲ.
ಅಂಬೇಡ್ಕರ್ ಶೋಷಿತರ ಕೈಯಲ್ಲಿ ರಾಜಕೀಯ ಅಧಿಕಾರದ ಕೀ ಇರಬೇಕು ಎಂಬ ಆಶಯ ಹೊಂದಿದ್ದರು, ಅದರಂತೆ ರಾಜಕಾರಣದಲ್ಲಿ ಸೂಕ್ತ ಸ್ಥಾನಮಾನದ ಆಕಾಂಕ್ಷಿಯಾಗುವುದು ತಪ್ಪಲ್ಲ, ಅವಕಾಶಕ್ಕಾಗಿ ಕಾಯದೆ ನಾವು ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಮಾಜಿ ಶಾಸಕ ಜಿ.ಬಿ ಶಿವಕುಮಾರ್ ಮಾತನಾಡಿ, ರಾಜಕಾರಣಿಯಾಗಿ ಎಂ.ಡಿ ಜಯರಾಮ್ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು, ಎಲ್ಲಾ ಸಮುದಾಯದವರ ಜೊತೆ ಒಡನಾಟ ಇಟ್ಟುಕೊಂಡು ಮುನ್ನಡೆದಿದ್ದರು, ಸ್ನೇಹ ಮಯ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಾಜಿ ಸದಸ್ಯೆ ಇಂದಿರಾ ಸತೀಶ್ ಬಾಬು, ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್, ರುದ್ರಪ್ಪ,ನಗರಸಭೆ ಸದಸ್ಯ ಶ್ರೀಧರ್, ಸುಂಡಳ್ಳಿ ಮಂಜುನಾಥ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ ಪ್ರಕಾಶ್ ಉಪಸ್ಥಿತರಿದ್ದರು.