ಶಾಲೆಗೆ ತೆರಳುವಾಗ ಸ್ಕೂಟರ್ ಗೆ ಅಡ್ಡಬಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯನಗರದ ಸುಭಾಷ್ ನಗರ 3ನೇ ಕ್ರಾಸ್ ನಲ್ಲಿ ಇಂದು (ಮಾ.6) ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ನಡೆದಿದೆ.
ಹಳದಿ ಟೀಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ ಶಾಲಾ ವಿದ್ಯಾರ್ಥಿಯು ತನ್ನ ಸೈಕಲ್ ಮೂಲಕ ಅವಸರದಲ್ಲಿ ಶಾಲೆಗೆ ತೆರಳುವಾಗ ಅಡ್ಡ ಬಂದಳು ಎಂಬ ಕಾರಣಕ್ಕೆ, KA-11 EW – 4842 ವಿದ್ಯುತ್ ಚಾಲಿತ ಸ್ಕೂಟರ್ ನಲ್ಲಿ ಬಂದ ನಾಗರೀಕನೊಬ್ಬ, ಎದುರು ಬಂದಿದ್ದು ಶಾಲೆಗೆ ಹೋಗುವ ಹೆಣ್ಣುಮಗು ಎಂಬುದನ್ನು ನೋಡದೇ ಆಕೆಯನ್ನು ದಬಾಯಿಸಿ, ಏರುಧ್ವನಿಯಲ್ಲಿ ಬೆದರಿಸುವ ಮೂಲಕ ಸಾರ್ವಜನಿಕವಾಗಿಯೇ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿರುವ ಈತನ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಣೆ ಹಾಗೂ ಮಂಡ್ಯ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.