ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾವೇರಿ ಸಮಸ್ಯೆ ಬಗೆಹರಿಸುವ ಜತೆಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನರೇಂದ್ರ ಮೋದಿ ಹಾಗೂ ಎಚ್.ಡಿ.ದೇವೇಗೌಡರು ಬಹುಮುಖ್ಯ ಪಾತ್ರವಹಿಸಲಿದ್ದಾರೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ, ಎಚ್.ಡಿ.ಕುಮಾರಸ್ವಾಮಿ ಅವರು ಗೆಲುವು ಕೂಡ ಅಷ್ಠೆ ಶತಾಸಿದ್ದವಾಗಿದ್ದು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಲಿದ್ದಾರೆ. ಈ ನಿಟ್ಟಿನಲ್ಲಿ ಕಾವೇರಿ ವಿವಾದ ಬಗೆಹರಿಯಲಿದ್ದು, ಮೇಕೆದಾಟು ಯೋಜನೆ ಕೂಡ ಅನುಷ್ಟಾಗೊಳ್ಳಲಿದೆ. ಕಾವೇರಿ ನೀರಿನ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ಹೋರಾಟ ಅವಿಸ್ಮರಣೀಯ ಎಂದರು.
ದೊಡ್ಡ ಮೀನು ಚಿಕ್ಕ ಮೀನನ್ನು ನುಂಗಬಾರದಿತ್ತು
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ದೊಡ್ಡ ಮೀನು ಚಿಕ್ಕಮೀನುಗಳನ್ನು ನುಂಗಿದಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅಸಮಾಧಾನ ಹೊರ ಹಾಕಿದರು
ಕುಮಾರಸ್ವಾಮಿ ಅವರು ಕೇಂದ್ರದ ಸಚಿವರಾದರೆ ನಾಡಿನ ಹಿತ ಕಾಯುವ ಜೊತೆಗೆ ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ದಿಗೊಳಿಸಲಿದ್ದಾರೆ. ನಾನು ಸಂಸದನಾಗಿದ್ದಾಗ ಮಂಡ್ಯಕ್ಕೆ ಕೇಂದ್ರಿಯ ವಿ.ವಿ, ಶ್ರೀರಂಗಪಟ್ಟಣ –ಬೀದರ್ ಹೆದ್ದಾರಿ ಅಭಿವೃದ್ದಿ, ನಾಗಮಂಗಲದ ಬಳಿ ಕೇಂದ್ರದ ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡಿಸಿದೆ. ಈ ಕೆಲಸಗಳಿಗೆ ಎಚ್.ಡಿ.ದೇವೇಗೌಡರು ಬೆಂಬಲಿಸಿ ಸಹಕಾರ ನೀಡಿದರು ಎಂದು ಹೇಳಿದರು.
ಈ ಬಾರಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಗೆಲ್ಲಿಸಬೇಕೆಂಬುದು ನನ್ನ ಇಚ್ಚೆಯಾಗಿತ್ತು. ಈ ಸಂಬಂಧ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿದ್ದೆ. ನಿಖಿಲ್ ಅವರು ಇದಕ್ಕೆ ಒಪ್ಪಲಿಲ್ಲ. ಬಳಿಕ ಡಿ.ಸಿ.ತಮ್ಮಣ್ಣನವರು ಸ್ಪರ್ಧಿಸಲಿ ಎಂಬ ಅಭಿಪ್ರಾಯ ನನ್ನದಾಗಿತ್ತು. ಆ ನಂತರದ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಡಿತು. ಅಮಿತಾ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲಿ ಎಂದು ಒತ್ತಾಯಿಸಿದರು. ಅಂತಿಮವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿಯಾದರು ಎಂದು ತಿಳಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಗ್ಯಾರಂಟಿ. ನಾವಿಬ್ಬರೂ ಒಟ್ಟಾಗಿ ರಾಜಕಾರಣ ಮಾಡೋಣ. ಸಿ.ಎಸ್.ಪುಟ್ಟರಾಜು ಅವರು ನುರಿತ ರಾಜಕಾರಣಿಯಾಗಿದ್ದಾರೆ. ಚುನಾವಣೆ ಯಾವ ರೀತಿ ಎದುರಿಸಬೇಕು ಎಂಬುದು ಅವರಿಗೆ ಚನ್ನಾಗಿ ಗೊತ್ತಿದೆ. ಡಾ.ಇಂದ್ರೇಶ್ ಅವರು ಪುಟ್ಟರಾಜು ಅವರ ಹತ್ತಿರ ರಾಜಕಾರಣ ಹೇಗೆ ಮಾಡಬೇಕೆನ್ನುವುದನ್ನು ಕಲಿಯಬೇಕಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರೀತಿ ವಿಶ್ವಾಸದಿಂದ ಒಟ್ಟಾಗಿ ಕೆಲಸ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲ್ಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಸಿ,ಅಶೋಕ, ಸೋಮಶೇಖರ್, ಕಣಿವೆ ಯೋಗೇಶ್, ಕನಗನಮರಡಿ ಬೊಮ್ಮರಾಜು, ಬಿಜೆಪಿ ಮುಖಂಡರಾದ ಸಿ.ಪಿ.ಉಮೇಶ್, ಜೆ.ಶಿವಲಿಂಗೇಗೌಡ, ಮಂಗಳ ನವೀನ್, ನೀಲನಹಳ್ಳಿ ಧನಂಜಯ, ಕೆ.ಎಲ್.ಆನಂದ ಇತರರು ಇದ್ದರು.