ಈ ಹಿಂದೆ ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರು ಪಕ್ಷೇತರವಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರ ಶಾಸಕತ್ವ ಉಳಿಸಿಕೊಟ್ಟಿದ್ದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ನರೇಂದ್ರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು “ನನ್ನನ್ನು ದೊಡ್ಡರಾಜು” ಎಂದು ಮೂದಲಿಸಿ ಕರೆದಿದ್ದಾರೆ. ಭೈರವೈಕ್ಯ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರೇ ನನ್ನನ್ನು ದೊಡ್ಡರಾಜು ಎಂದು ಕರೆದಿದ್ದಾರೆ. ನನಗೆ ರಾಜಕೀಯ ಶಕ್ತಿ ಕೊಟ್ಟವರು ಎಚ್.ಡಿ.ದೇವೇಗೌಡರು. ದೇವರಂತೆ ಆಶೀರ್ವಾದ ಮಾಡಿದವರು ಚುಂಚಶ್ರೀಗಳು. ಕಳಂಕರಹಿತ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನೀವೇನು (ಪಿಎಂಎನ್) ನನ್ನನ್ನು ಟೀಕಿಸುವುದು? ನನ್ನನ್ನು ಟೀಕಿಸುವ, ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದರು.
ಅಮರಾವತಿ ಚಂದ್ರಶೇಖರ್ ಮತ್ತವರ ಸಹೋದರರು 2019ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ಕುಮಾರಸ್ವಾಮಿ ಪರವಾಗಿ ಚುನಾವಣೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾವು ಮಾತುಕೊಟ್ಟಂತೆ ಅವರ ಸಹೋದರ ಅಶ್ವತ್ಥ್ ಅವರನ್ನು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು, ಅವರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಮಾಡಿದೆವು. ಆದರೆ, ನೀವು ನಿಮ್ಮ ಪಕ್ಷದವರೇ ಆದ, ಜಿಲ್ಲೆಯಲ್ಲಿ ಕಿತ್ತೂರುರಾಣಿ ಚೆನ್ನಮ್ಮಂತಿರುವ ಮಾಜಿ ಶಾಸಕ ಮಲ್ಲಾಜಮ್ಮ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ನಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಸುರೇಶ್ಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮುಖಂಡ ನವೀನ್ಕುಮಾರ್ ಹಾಜರಿದ್ದರು.