ಒಬ್ಬ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಯಾವುದೇ ಆರೋಪ-ಪ್ರತ್ಯಾರೋಪವಿಲ್ಲದೆ,ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದುವುದು ದೊಡ್ಡ ಸೌಭಾಗ್ಯ ಎಂದು ಕಾ.ನೀ.ನಿ.ನಿ ಕಾರ್ಯಪಾಲಕ ಇಂಜಿನಿಯರ್ ಪಿ.ಹೊನ್ನರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಕಾ.ನೀ.ನಿ.ನಿ.ವಿಶ್ವೇಶ್ವರಯ್ಯ ನಾಲಾ ವಿಭಾಗದ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ನಿವೃತ್ತಿಯ ಕೊನೆಯ ಎರಡು ವರ್ಷಗಳ ಸೇವೆಯನ್ನು ನನ್ನ ತವರು ಜಿಲ್ಲೆಯಲ್ಲಿ ಮಾಡಿರುವುದು ನನಗೆ ಬಹಳ ಸಂತೋಷ ತಂದಿದೆ.ನಾನು ಕೊನೆಯ ಸೇವಾವಧಿಯನ್ನು ನನ್ನ ತವರು ನೆಲದಲ್ಲಿ ಮಾಡಲು ಅಧೀಕ್ಷಕ ಅಭಿಯಂತರ ಕೆ.ಜಿ.ವಿಜಯಕುಮಾರ್ ಅವರೇ ಕಾರಣ. ಅವರು ನನ್ನನ್ನು ಇಲ್ಲಿಗೆ ಕರೆತಂದಿದ್ದು ನನ್ನ ಅನಾರೋಗ್ಯದ ತಾಯಿಯನ್ನು ಕಡೆ ದಿನಗಳಲ್ಲಿ ನೋಡಿಕೊಳ್ಳುವಂತಾಯಿತು ಎಂದರು.
ನಾನು ಮಂಡ್ಯದಲ್ಲಿ ಇದ್ದ ಎರಡೂವರೆ ವರ್ಷ ಕೋವಿಡ್ ಕಾರಣದಿಂದ ಸರ್ಕಾರ ಅನುದಾನ ನೀಡದಿರುವುದರಿಂದ ನಾನು ಅಂದುಕೊಂಡಂತೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದಿರುವ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ಸರ್ಕಾರದ ಅನುದಾನ ಸಿಕ್ಕಿದ್ದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು ಎಂದರು.
ಸರಳತೆ, ಸಮಯಪಾಲನೆ ನಾನು ಕೆ.ಜಿ. ವಿಜಯಕುಮಾರ್ ಅವರಿಂದ ಕಲಿತ ಪಾಠ. ಅವರು ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಪ್ರೋತ್ಸಾಹ, ಸಹಕಾರ ನೀಡಿದ್ದಾರೆ.ಅವರ ಸಹಕಾರದಿಂದಲೇ ನನಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು.
ನನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ನನ್ನ ಸಹೋದ್ಯೋಗಿಗಳು,ಡಿ ದರ್ಜೆ ನೌಕರರು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.
ಗುತ್ತಿಗೆದಾರರು ಮತ್ತು ಇಂಜಿನಿಯರ್ ಒಂದೇ ನಾಣ್ಯದ ಎರಡು ಮುಖಗಳು. ಇಂಜಿನಿಯರ್ ಇಲ್ಲದೆ ಗುತ್ತಿಗೆದಾರ ಇಲ್ಲ. ಗುತ್ತಿಗೆದಾರನಿಲ್ಲದೆ ಇಂಜಿನಿಯರ್ ಇಲ್ಲ. ನಾನು ನನ್ನ ಅವಧಿಯಲ್ಲಿ ಗುತ್ತಿಗೆದಾರರಿಗೆ ನನ್ನ ಕೈಲಾದ ಮಟ್ಟಿಗೆ ಸಹಕಾರ ನೀಡಿದ್ದೇನೆ. ನನ್ನ ಅವಧಿಯಲ್ಲಿ ಸವಡೆಗಳನ್ನು ನಾನು ನಾನು ನೆನಪಿಸಿಕೊಳ್ಳುತ್ತೇನೆ. ಅವರಿಗೆ ಪ್ರತಿ ಬಾರಿ ಸಂಬಳ ಕೊಡಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದೇನೆ. ಅವರು ಸರಿಯಾದ ಕಾಲಕ್ಕೆ ಕಾಲುವೆಗಳಲ್ಲಿ ನೀರು ಬಿಟ್ಟಿದ್ದರಿಂದ ನನ್ನ ಅವಧಿಯಲ್ಲಿ ಯಾವುದೇ ರೈತರು ಒಂದು ದಿನವೂ ಸವಡೆಗಳ ಬಗ್ಗೆ ದೂರು ನೀಡಲಿಲ್ಲ.ಕೋವಿಡ್ ಸಂದರ್ಭದಲ್ಲಿ ಅವರ ಶ್ರಮ ಅಪಾರ ಎಂದರು.
ಈ ಸಂದರ್ಭದಲ್ಲಿ ನಿವೃತ್ತರಾದ ಪಿ. ಹೊನ್ನ ರಾಜು ಅವರನ್ನು ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು,ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದ ಖಜಾಂಚಿ ಯತಿರಾಜು, ಸದಸ್ಯರಾದ ರವೀಂದ್ರ ಕುಮಾರ್,ತಮ್ಮಣ್ಣ ಸೇರಿದಂತೆ ಹಲವರು ಪುಷ್ಪ ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಕಾವೇರಿ ನೀರಾವರಿ ನಿಗಮದ ಸಿಬ್ಬಂದಿಗಳು,ಅಭಿಯಂತರರು ಮತ್ತು ಸವಡೆಗಳು ಅಭಿನಂದನೆ ಸಲ್ಲಿಸಿದರು.
ಅಧೀಕ್ಷಕ ಅಭಿಯಂತರ ಕೆ.ಜಿ.ವಿಜಯಕುಮಾರ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಸ್.ಎಸ್. ನಾಗರಾಜು,ಕಾರ್ಯಪಾಲಕ ಅಭಿಯಂತರ ದೇವರಾಜು ಅಭಿಯಂತರರಾದ ಜ್ಞಾನಮೂರ್ತಿ, ಸುಚೇತಾ,ದೇವರಾಜು ಸೇರಿದಂತೆ ಹಲವರಿದ್ದರು.