ಮಾಜಿ ಶಾಸಕ, ಕ್ರೀಡಾ ಪೋಷಕ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಸ್ಮರಣಾರ್ಥ ಅಖಿಲ ಭಾರತ ಆಹ್ವಾನಿತ ಪುರುಷರ ಹೊನಲು-ಬೆಳಕಿನ ಗಗನ ಖೋ-ಖೋ ಪಂದ್ಯಾವಳಿ ಯನ್ನು ಜೂ. 2 ರಿಂದ 5ರ ವರೆಗೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ಸಂಚಾಲಕರಾದ ಡಾ. ಅಭಿನಯ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಭಾರತೀಯ ಖೋ-ಖೋ ಫೆಡರೇಷನ್, ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್, ಮಂಡ್ಯ ಜಿಲ್ಲಾ ಖೋ-ಖೋ ಸಂಸ್ಥೆ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ಸಹಯೋಗದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, 11 ತಂಡಗಳು ಭಾಗವಹಿಸಲಿದೆ. ಅಂತರರಾಷ್ಟ್ರೀಯ ಆಟಗಾರರಾದ ಕ್ಯಾತನಹಳ್ಳಿ ಗ್ರಾಮದವರೇ ಆದ ಕಿರಣ್, ವರುಣ್ ಕುಮಾರ್, ಹರ್ಷ, ಧನುಷ್ ಅವರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯನ್ನು ಎಸ್ಆರ್ಬಿ ಸ್ಪೋರ್ಟ್ಸ್ ಯೂಟ್ಯೂಬ್ ಮೂಲಕ ನೇರ ವೀಕ್ಷಣೆ ಮಾಡಬಹುದು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಸಂಸ್ಥೆ, ಅಧ್ಯಕ್ಷರ ತಂಡಗಳು, ಪಶ್ಚಿಮ ರೈಲ್ವೆ, ಕೇಂದ್ರ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ, ಮಹಾರಾಷ್ಟ್ರ ರಾಜ್ಯ ಪೊಲೀಸ್, ಮಹಾರಾಷ್ಟ್ರ ರಾಜ್ಯ ವಿದ್ಯುತ್ಚ್ಛಕ್ತಿ ಮಂಡಳಿ, ಮಹಾನಗರ ಪಾಲಿಕೆಯ ಮುಂಬೈ, ಮಹಾನಗರ ಪಾಲಿಕೆ ನವಿ ಮುಂಬೈ ಮತ್ತು ಮುಂಬೈ ಪೊಲೀಸ್ ತಂಡಗಳು ಭಾಗವಹಿಸಲಿವೆ ಎಂದರು.
ಆಟಗಾರರಿಗೆ ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಮತ್ತು ಉತ್ತರ ಭಾರತ ಶೈಲಿಯ ಊಟದ ವ್ಯವಸ್ಥೆ ಇರುತ್ತದೆ. ಖೋ-ಖೋ ಫೆಡರೇಷನ್ ಆಫ್ ಇಂಡಿಯಾ ನಿಯಮಾನುಸಾರ ಲೀಗ್ ಮಾದರಿಯಲ್ಲಿ ಪಂದ್ಯಗಳನ್ನು ಮ್ಯಾಟ್ ಮೇಲೆ ಆಡಿಸಲಾಗುವುದು ಎಂದು ತಿಳಿಸಿದರು.
ವಿಜೇತ ತಂಡಗಳಿಗೆ 1 ಲಕ್ಷ – ಪ್ರಥಮ,50 ಸಾವಿರ – ದ್ವಿತೀಯ, 30 ಸಾವಿರ – ತೃತೀಯ ಸ್ಥಾನ, 20ಸಾವಿರ- 4ನೇ ಸ್ಥಾನ ಜತೆಗೆ ಪಾರಿತೋಷಕ. ಅಲ್ಲದೆ ಉತ್ತಮ ದಾಳಿಗಾರ, ರಕ್ಷಣೆಗಾರ ಹಾಗೂ ಸರ್ವಾಂಗೀಣ ಆಟಗಾರರಿಗೆ 5 ಸಾವಿರ ರೂ. ನೀಡಲಾಗುವುದು ಎಂದು ಹೇಳಿದರು.
ಜೂ. 2ರ ಸಂಜೆ 6 ಗಂಟೆಗೆ ಪಂದ್ಯಾವಳಿಯ ಉದ್ಘಾ ಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾದಿ ಕಾರಿ ಎಸ್. ಅಶ್ವತಿ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ಗೌರವಾಧ್ಯಕ್ಷ ಕೆ.ಪಿ. ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಒಕ್ಕೂಟದ ಅಧ್ಯಕ್ಷ ಕೆ.ಬಿ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಎಂದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕಿ ಡಾ. ಟಿ.ಸಿ. ಪೂರ್ಣಿಮಾ ಅವರು ಶುಭನುಡಿ ನುಡಿಯಲಿದ್ದು, ಭಾರತೀಯ ಖೋ ಖೋ ಫೆಡರೇಷನ್ ಕಾರ್ಯದರ್ಶಿ ಮಹೇಂದ್ರ ತ್ಯಾಗಿ ಕ್ರೀಡಾ ಸಂದೇಶ ನೀಡಲಿದ್ದಾರೆ. ಕ ರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ವರ್ ಕ್ರಿಡಾ ಹಿತವಚನ ನುಡಿಯಲಿದ್ದಾರೆ ಎಂದರು.
ಸಮಾರೋಪ ಸಮಾರಂಭ
ಜೂ. 5ರಂದು ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠರಾದ ಸುನೀತಾ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಡ್ಯ ಜಿಲ್ಲಾ ಖೋ ಖೋ ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಗೋವಿಂದೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ಎನ್. ಚಲುವರಾ ಯಸ್ವಾಮಿ, ಮಾಜಿ ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರ ಸಂದೇಶ್ ಸ್ವಾಮಿ, ಪಾಂಡವಪುರ ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಅಳಗಂಚಿ ಉಪಾಧ್ಯಕ್ಷ ಎಂ.ವೇಲು ಸ್ವಾಮಿ, ಚಾಂಷುಗರ್ಸ್ ಉಪಾಧ್ಯಕ್ಷ ಆರ್.ಮಣಿ, ಎನ್ಎಸ್ಎಲ್ ಷುಗರ್ಸ್ ಉಪಾಧ್ಯಕ್ಷ ಪಿ.ಜಿ.ಕೆ.ದತ್ತ, ನಿರಾಣಿ ಷುಗರ್ಸ್ ಉಪಾಧ್ಯಕ್ಷ ಶಿವಾನಂದ ತಲಗಾರ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ಶೋಭ ನಾಯಕ್, ಅಂತರರಾಷ್ಟ್ರೀಯ ಯೋಗ ಪಟು ಖುಷಿ ಅವರನ್ನು ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ಗೌರವಾಧ್ಯಕ್ಷ ಕೆ.ಪಿ. ದರ್ಶನ್ ಪುಟ್ಟಣ್ಣಯ್ಯ ಅವರು ಸನ್ಮಾನಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಖಜಾಂಚಿ ರವಿಕುಮಾರ್, ವಕೀಲ ಮೋಹನ್ ಕುಮಾರ್, ಚಲುವರಾಜು, ಗೋವಿಂದ ರಾಜು ಇದ್ದರು.