ಜಗತ್ತಿನಲ್ಲಿ ಸೇವಾಸಂಸ್ಥೆಗಳು ಸ್ನೇಹ-ಸೇವೆ ಮಾಡುವ ಧ್ಯೇಯದಿಂದ ನೂರಾರು ವರ್ಷ ಬದುಕಿ ಬಾಳಿ ಬೆಳೆಯುತ್ತವೆ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ನಿರ್ದೇಶಕ ಡಾ. ನಾಗರಾಜು ವಿ. ಭೈರಿ ಹೇಳಿದರು.
ಮಂಡ್ಯನಗರದ ಕರ್ನಾಟಕ ಸಂಘದ ಕೆ ವಿ ಎಸ್ ಎಸ್ ಭವನದಲ್ಲಿ ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಆಫ್ ಅಸೋಸಿಯೇಷನ್ ಜಿಲ್ಲೆ 268 ಎಸ್ ಮಂಡ್ಯ ಆಯೋಜಿಸಿದ್ದ ಮಂಡ್ಯ ಅಲಯನ್ಸ್ ಸಂಸ್ಥೆಗಳ 2024-25 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮತ್ತು ಹೊಸ ಸಂಸ್ಥೆಗಳ ಉದ್ಘಾಟನೆ ಹಾಗೂ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾಸಂಸ್ಥೆಗಳಾದ ರೆಡ್ಕ್ರಾಸ್, ರೋಟರಿ, ಅಲಯನ್ಸ್, ಲಯನ್ಸ್ ಸೇರಿದಂತೆ ಹಲವು ಸೇವಾಸಂಸ್ಥೆಗಳು ಇವೆ, ಇವು ಸ್ನೇಹ-ಸೇವೆ ಧ್ಯೇಯದಿಂದ ನೂರಾರು ವರ್ಷಗಳು ಬಾದುಕಿ ಬಾಳುತ್ತಿವೆ, ಇಂತಹ ಸಂಸ್ಥೆಗಳಲ್ಲಿ ಅಲಯನ್ಸ್ ಸಂಸ್ಥೆಗೆ ಮಂಡ್ಯದಲ್ಲಿ ಸಂಸ್ಥಾಪಕ ಸದಸ್ಯರಾಗಿರುವುದು ಚರಿತ್ರಾರ್ಹ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಲಯನ್ಸ್ ಸಂಸ್ಥೆ ಜಿಲ್ಲೆ 268ರ ಜಿಲ್ಲಾ ರಾಜ್ಯಪಾಲ ಕೆ.ಟಿ ಹನುಮಂತು ಮಾತನಾಡಿ, ಮುಂದಿನ ದಿಗಳಲ್ಲಿ ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಉತ್ತಮ ಸೇವಾಕಾರ್ಯ ಮಾಡಿ, ತಮ್ಮ ಹುಟ್ಟುಹಬ್ಬ, ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಗಳನ್ನು ಆಚರಿಸಿ, ಪರಿಸರ, ಆರೋಗ್ಯ ಸೇವೆಗೆ ಹೆಚ್ಚು ಮಹತ್ವ ನೀಡಿ ಎಂದರು.
ಎಲ್ಲರಲ್ಲೂ ಸೇವಾ ಮನೋಭಾವವಿರುವುದಿಲ್ಲ, ಅಂತಹವರಲ್ಲೂ ಸೇವಾಕಾರ್ಯ ಮಾಡಿಸುವ ಉದ್ದೇಶಗಳು ನಮ್ಮಿಂದ ಆಗಬೇಕು, ಸ್ನೇಹ-ಸೇವೆ ಅಲಯನ್ಸ್ ಸಂಸ್ಥೆಯ ಉದ್ದೇಶವಾಗಿದೆ, ವರ್ಷಕ್ಕೆ 2 ಸೇವಾ ಕಾರ್ಯಗಳನ್ನು ಮಾಡಿ, ಉತ್ತಮ ಸೇವಾ ಸಂಸ್ಥೆ ಎನ್ನಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸೇವಾ ಕಾರ್ಯ ಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಜಿಪಿ ದಿವಾಕರ್, ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಜಂತ ರಂಗಸ್ವಾಮಿ, ಕೆ ಮುನಿಯಪ್ಪ, 1ನೇ ಉಪ ರಾಜ್ಯಪಾಲ ಎಚ್ ಮಾದೇಗೌಡ, 2ನೇ ಉಪ ರಾಜ್ಯಪಾಲ ಕೆ ಆರ್ ಶಶಿಧರ ಈಚೆಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್ ಚಂದ್ರಶೇಖರ್, ಜಿಲ್ಲಾ ಸಂಪುಟ ಖಜಂಚಿ ಟಿ.ಎನ್ ರಕ್ಷಿತ್ರಾಜ್, ಪಿ ಆರ್ ಓ ಅಪ್ಪಾಜಿ, ಜಿಲ್ಲಾ ರಾಯಬಾರಿ ಎಸ್ ಜೆ ಮಂಜುನಾಥ್, ಪಿ ಎಸ್ ಟಿ ಫಾರಂ ಛೇರ್ಮನ್ ಡಾ.ವೈ.ಎಚ್.ರತ್ನಮ್ಮ, ಪ್ರಾಂತೀಯ ಅಧ್ಯಕ್ಷ ಜಲಜಾಕ್ಷಿ, ವಲಯ ಅಧ್ಯಕ್ಷ ಆರ್ ಮಹೇಶ್, ಎಂ ಲೋಕೇಶ್, ಮಹಾಲಕ್ಷ್ಮಿ ಸೇರಿದಂತೆ ಹಲವರು ಹಾಜರಿದ್ದರು.