ಆದಷ್ಟು ಶೀಘ್ರ ಮೂರು ಹಂತಗಳ ಲೋಕಸಭಾ ಚುನಾವಣೆಯ ಮತದಾನದ ನಿಖರವಾದ ಅಂಕಿಅಂಶಗಳನ್ನು ಪ್ರಕಟಿಸಲು ಹಾಗೂ ಎನ್ಡಿಎ ಒಕ್ಕೂಟ ಚುನಾವಣಾ ಪ್ರಚಾರದಲ್ಲಿ ಕೋಮುವಾದ ಬಳಸುತ್ತಿರುವುದರ ವಿರುದ್ಧ ದೂರು ಸಲ್ಲಿಸಲು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ‘ಇಂಡಿಯಾ’ ಒಕ್ಕೂಟದ ನಾಯಕರು ಇಂದು ಸಂಜೆ ಭೇಟಿಯಾಗಲಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕರು ಒಟ್ಟಾಗಿ ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಮೊದಲು ಮಾರ್ಚ್ನಲ್ಲಿ ದೆಹಲಿ ಮುಖ್ಯಮಂತ್ರಿ ಬಂಧನದ ವಿರುದ್ಧ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ವಿಪಕ್ಷ ನಾಯಕರನ್ನು ಬಂಧಿಸುವುದನ್ನು ತಡೆಯಬೇಕೆಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದರು. ಆದರೆ ಆಯೋಗವು ಕೇಂದ್ರೀಯ ತನಿಖಾ ಸಂಸ್ಥೆಗಳ ಬಗ್ಗೆ ಮಧ್ಯಸ್ಥಿಕೆ ವಹಿಸಲು ನಿರಾಕರಿಸಿತ್ತು.
ಆರಂಭದಲ್ಲಿ ಸಭೆಯನ್ನು ಗುರುವಾರ(ಮೇ.9) ಸಂಜೆ ಎಂದು ನಿರ್ಧರಿಸಲಾಗಿತ್ತು. ಆದರೆ ತಡ ರಾತ್ರಿಯಲ್ಲಿ ಶುಕ್ರವಾರಕ್ಕೆ ನಿಗದಿಪಡಿಸಲಾಯಿತು ಎಂದು ವಿಪಕ್ಷ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಒಕ್ಕೂಟದ ನಾಯಕರಿಗೆ ಚುನಾವಣಾ ಆಯೋಗದ ಬಗ್ಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಚುನಾವಣಾ ಆಯೋಗವು ನೈಜ ಮತದಾನದ ಅಂಕಿಅಂಶವನ್ನು ಪ್ರಕಟಪಡಿಸಲು ಹಾಗೂ ಮತದಾನದ ಅಂಕಿಅಂಶವನ್ನು ಬಿಡುಗಡೆ ಮಾಡದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದರು.
ಅಲ್ಲದೆ ಮುಂದಿನ ಹಂತಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸದಿರುವುದು ವಿಷಾದನೀಯ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದರು.
ತೃಣಮೂಲ ಕಾಂಗ್ರೆಸ್ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಕ್ಷಣವೇ ಮತದಾರರ ನೈಜ ಅಂಕಿಅಂಶಗಳು ಹಾಗೂ ಇತರ ವಿವರಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು.
ಚುನಾವಣಾ ಆಯೋಗವು ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ ಹಾಗೂ ಎರಡನೇ ಹಂತದ ಮತದಾನ ನಡೆದ 4 ದಿನದ ನಂತರ ಮತದಾನದ ಶೇಕಡವಾರು ಪ್ರಮಾಣವನ್ನು ಬಿಡುಗಡೆಗೊಳಿಸಿತ್ತು. ಅಲ್ಲದೆ ಎರಡು ಕಡೆಗಳಲ್ಲಿ ಚುನಾವಣಾ ಆಯೋಗವು ಮತದಾನದ ನಿರ್ದಿಷ್ಟ ಅಂಕಿಅಂಶಗಳನ್ನು ಒದಗಿಸಿಲ್ಲ.
ಒಟ್ಟು ಮತದಾನದ ವಿವರವನ್ನು ನೀಡುತ್ತಿದ್ದ ಮತದಾರರ ಮತದಾನದ ಆಪ್ನಲ್ಲಿ ಮೊದಲ ಹಂತದ ಮತದಾನ ನಡೆಯುವ ಸಂದರ್ಭದಲ್ಲಿ ಒಟ್ಟು ಮತದಾನದ ವಿವರವನ್ನು ನೀಡಿರಲಿಲ್ಲ. ಮೂರನೇ ಹಂತದ ಮತದಾನದ ವೇಳೆಯಲ್ಲಿ ಇದನ್ನು ಪ್ರಾರಂಭಿಸಲಾಯಿತು.