ಜನಪರ ಹೋರಾಟಗಾರ, ಸ್ನೇಹಜೀವಿ ಸಿಂಧಘಟ್ಟ ರವಿಕುಮಾರ್ ಅವರ ಅಕಾಲಿಕ ನಿಧನವು ನಾಗರೀಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಮಾಜ ಸೇವಕಿ ಮಾಜಿ ಸ್ಪೀಕರ್ ಕೃಷ್ಣ ಅವರ ಧರ್ಮಪತ್ನಿ ಇಂದ್ರಮ್ಮಕೃಷ್ಣ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಕಚೇರಿಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ರವಿಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ದಕ್ಷತೆಯಿಂದ ಕೆಲಸ ಮಾಡಿದ ರವಿಕುಮಾರ್, ಮಾಜಿ ಸ್ಪೀಕರ್ ಕೃಷ್ಣ ಅವರ ಮೆಚ್ಚಿನ ಶಿಷ್ಯರಾಗಿದ್ದರು. ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಟಾನದ ಸ್ಥಾಪನೆಯಲ್ಲಿ ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ರವಿ ಶ್ರೀಚನ್ನಕೇಶವ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುವ ಮೂಲಕ ನಾಗರೀಕ ಸಮಾಜದ ಉನ್ನತಿಗೆ ತಮ್ಮ ಅಮೂಲ್ಯ ಕಾಣಿಕೆ ನೀಡಿದ್ದರು ಎಂದು ಸ್ಮರಿಸಿದರು.
ಸದಾ ಕಾಲವೂ ಒಂದಿಲ್ಲೊಂದು ಕೆಲಸದ ಒತ್ತಡದಲ್ಲಿ ಇರುತ್ತಿದ್ದ ರವಿ ಅವರ ನಿಸ್ವಾರ್ಥ ಸೇವೆಯು ನಾಗರಿಕ ಸಮಾಜಕ್ಕೆ ಅವಶ್ಯವಾಗಿ ಬೇಕಾಗಿತ್ತು. ರವಿ ಅವರ ಅಕಾಲಿಕ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಇಂದ್ರಮ್ಮ ಕಂಬನಿ ಮಿಡಿದರು.
ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಜವರಾಯಿಗೌಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂಚಿ ಸಣ್ಣ ಸ್ವಾಮಿಗೌಡ, ಕತ್ತರಘಟ್ಟ ವಾಸು ಸಭೆಯಲ್ಲಿ ಮಾತನಾಡಿದರು.
ಪ್ರತಿಷ್ಠಾನದ ನಿರ್ದೇಶಕರಾದ ಸಂತೆಬಾಚಹಳ್ಳಿ ನಾಗರಾಜು, ಹಾದನೂರು ಪರಮೇಶ್, ಮನಮುಲ್ ಮಾಜಿ ಅಧ್ಯಕ್ಷ ಚನಿಂಗೆಗೌಡ, ಶಿವಣ್ಣ, ಹೆಮ್ಮನಹಳ್ಳಿ ರಮೇಶ್, ಮರಡಹಳ್ಳಿ ರಾಮೇಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.