ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿ ಇಂದು ಭರ್ತಿ ಒಂದು ತಿಂಗಳಾಯ್ತು. ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಯ ಮತದಾನ ಮುಗಿದು ಏಪ್ರಿಲ್ 27 ರಂದು ವಿದೇಶಕ್ಕೆ ಹಾರಿದ ಪ್ರಜ್ವಲ್ ರೇವಣ್ಣ ಇನ್ನೂ ಎಸ್ಐಟಿ ಮುಂದೆ ಹಾಜರಾಗದೆ ವಿದೇಶದಲ್ಲಿಯೇ ತಲೆ ಮರೆಸಿಕೊಂಡಿದ್ದಾನೆ.
ಎಲ್ಲಿದ್ದರೂ ಸಹ ತಕ್ಷಣವೇ ಬಂದು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸು ಎಂದು ಪ್ರಜ್ವಲ್ ರೇವಣ್ಣನಿಗೆ ಜೆಡಿಎಸ್ ವರಿಷ್ಠರಾದ ತಾತ ಹೆಚ್.ಡಿ.ದೇವೇಗೌಡ ಹಾಗೂ ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ ಗಡುವು ನೀಡಿದ್ದರೂ, ಆತ ವಿದೇಶದಿಂದ ಬರದಿರುವುದು ಜೆಡಿಎಸ್ ಕಾರ್ಯಕರ್ತರಿಗೆ ಸಾಕಷ್ಟು ಸಿಟ್ಟು ತರಿಸಿದೆ.
ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಮಾತಿಗೆ ಬೆಲೆ ಕೊಟ್ಟು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸು ಎಂದು ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಕರೆ ಕೊಟ್ಟು ವಾರವಾಗುತ್ತಾ ಬಂತು. ಆದರೂ ಚಿಕ್ಕಪ್ಪ ಕುಮಾರಸ್ವಾಮಿ ಮಾತಿಗೆ ಪ್ರಜ್ವಲ್ ರೇವಣ್ಣ ಕ್ಯಾರೇ ಎನ್ನಲಿಲ್ಲ.
ನನ್ನ ಬಗ್ಗೆ ಏನಾದರೂ ಗೌರವವಿದ್ದರೆ,ಎಲ್ಲಿದ್ದರೂ ಹಿಂದಿರುಗಿ ಕಾನೂನನ್ನು ಎದುರಿಸು,ನನ್ನ ಎಚ್ಚರಿಕೆಗೆ ಮನ್ನಣೆ ಕೊಡದಿದ್ದರೆ ನಾನು ಮತ್ತು ಕುಟುಂಬದವರೆಲ್ಲರ ಕೋಪವನ್ನು ಎದುರಿಸಬೇಕಾಗುತ್ತೆ. ಮನೆಯವರ ಕಣ್ಣಲ್ಲಿ ಏಕಾಂಗಿಯಾಗಬೇಕಾಗುತ್ತೆ. ನನ್ನ ಮಾತಿಗೆ ಗೌರವ ಕೊಡುವುದಾದರೆ ಕೂಡಲೇ ಬಂದು ಎಸ್ಐಟಿ ಮುಂದೆ ಶರಣಾಗು ಎಂದು ತಾತ ದೇವೇಗೌಡರು ಬಹಿರಂಗ ಪತ್ರ ಬರೆದು ನಾಲ್ಕು ದಿನಗಳಾದರೂ ಸಹ ಪ್ರಜ್ವಲ್ ರೇವಣ್ಣ ಅವರ ಮಾತಿಗೂ ಗೌರವ ಕೊಡಲಿಲ್ಲ.
ಇಂದಿಗೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿ ಒಂದು ತಿಂಗಳಾಯ್ತು. ಆದರೆ ಇಂದಿಗೂ ಕೂಡ ಆತ ವಿದೇಶದಿಂದ ರಾಜ್ಯಕ್ಕೆ ಆಗಮಿಸಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಂಭವ ಕಾಣಿಸುತ್ತಿಲ್ಲ.
ಹಾಗಾಗಿ ಪ್ರಜ್ವಲ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಚಿಕ್ಕಪ್ಪ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರ ಬಗ್ಗೆ ಸಹ ಗೌರವವಿಲ್ಲವೇ ಎನ್ನುವ ಚರ್ಚೆ ಜನ ಸಾಮಾನ್ಯರದ್ದಾಗಿದೆ.