ಬಿಜೆಪಿ ಮಿತ್ರ ಪಕ್ಷಗಳ ನಾಯಕರಾದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಲೋಕಸಭೆ ಸ್ಪೀಕರ್ ಸ್ಥಾನ ಕೇಳಿದ್ದು ಯಾಕೆ?? ಎಂಬುದು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವುದೇನೋ ಸರಿ. ಆದರೆ ಸ್ಪೀಕರ್ ಸ್ಥಾನಕ್ಕೆ ಹಠ ಹಿಡಿದಿರುವುದು ಯಾಕೆ ? ಹೇಳಿ ಕೇಳಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಇಬ್ಬರೂ ರಾಜಕೀಯದ ಹಳೆ ತಲೆಗಳು. ದೇಶದ ರಾಜಕೀಯದ ಏರುಪೇರುಗಳನ್ನೇಲ್ಲ ನೋಡಿದವರು.
ಅದರಲ್ಲೂ ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿ ರಾಜಕೀಯ ಮಾಡುತ್ತಾ ಬಂದಿದೆ, ತನಗೆ ಕಷ್ಟಕಾಲದಲ್ಲಿ ನೆರವು ನೀಡಿದ ಮಿತ್ರ ಪಕ್ಷಗಳನ್ನು ಹೇಗೆ ಸರ್ವನಾಶ ಮಾಡಿದೆ ಎಂಬ ಅರಿವು ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ.
ಈಗ ಬೆಂಬಲ ಪಡೆದು ತಿಂಗಳ ನಂತರ ತಮ್ಮ ಪಕ್ಷವನ್ನು ಒಡೆದು ಸಂಸದರನ್ನು ಸೆಳೆದು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಸದಾ ಬಿಜೆಪಿಯನ್ನು ನಾಯ್ದು, ನಿತೀಶ್ ಅನುಮಾನದಿಂದಲೇ ನೋಡುತ್ತಿದ್ದಾರೆ. ಏಕೆಂದರೆ ಅವರ ಮುಂದೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದು ಶಾಸಕರನ್ನು ಸೆಳೆದುಕೊಂಡ ಪಾಠ ಕಣ್ಣ ಮುಂದೆ ಇದೆ. ಒಂದು ವೇಳೆ ನಾವು ಯಾಮಾರಿದರೆ ತಮ್ಮ ಪಕ್ಷಗಳನ್ನು ಒಡೆದು ಎಂಪಿಗಳನ್ನು ಸೆಳೆದು ತಮ್ಮನ್ನು ಕೇಂದ್ರ ಸರ್ಕಾರದಿಂದ ಹೊರಗೆ ಹಾಕಲು ಬಿಜೆಪಿ ಹೇಸುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಮನವರಿಕೆಯಾಗಿದೆ.
ಒಂದು ವೇಳೆ ಆ ರೀತಿಯ ಬೆಳವಣಿಗೆ ನಡೆದರೆ ಚೆಂಡು ಲೋಕಸಭೆ ಸ್ಪೀಕರ್ ಅಂಗಳಕ್ಕೆ ಬರುತ್ತದೆ, ಪಕ್ಷಾಂತರ ಆದ ಎಂಪಿಗಳ ಸದಸ್ಯತ್ವ ರದ್ದು ಮಾಡುವುದು ಅಥವಾ ಮಾನ್ಯತೆ ನೀಡುವುದು ಸ್ಪೀಕರ್ ಅವರಿಗೆ ಇರುವ ಅಧಿಕಾರವಾಗಿದೆ. ಬಿಜೆಪಿ ಏನಾದರೂ ಆಟ ಆಡಲು ಪ್ರಯತ್ನಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ಸ್ಪೀಕರ್ ತಮ್ಮರಾಗಿದ್ದರೆ ಉತ್ತಮ ಎಂಬುದು ನಿತೀಶ್ ಹಾಗೂ ನಾಯ್ದು ಅವರ ಮಾಸ್ಟರ್ ಪ್ಲಾನ್.