ವಿದ್ಯಾರ್ಥಿ ದೆಸೆಯಲ್ಲಿಯೇ ಗಿಡಗಳನ್ನು ಬೆಳೆಸುವ ಹವ್ಯಾಸವನ್ನು ರೂಢಿಸಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಉಪ ಅರಣ್ಯ ವಲಯಾಧಿಕಾರಿ ಶಿವರಾಜ್ ಕರೆ ನೀಡಿದರು.
ಮಳವಳ್ಳಿ ತಾಲ್ಲೂಕಿನ ಉಪ್ಪನಹಳ್ಳಿ(ಕನ್ನಹಳ್ಳಿ) ಗ್ರಾಮದ ಮಹಾಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಡಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವನ ದುರಾಸೆಯಿಂದ ಪರಿಸರ ದಿನದಿಂದ ದಿನಕ್ಕೆ ನಾಶ ಹೊಂದುವುದರೊಂದಿಗೆ ಮನುಷ್ಯ ಅಂತ್ಯ ಕಾಲಕ್ಕೆ ಸಮೀಸುತ್ತಿದ್ದಾನೆ.ಎಚ್ಚರಿಕೆ ವಹಿಸಿ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿದರೇ ಮಾತ್ರ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕನ್ನು ಸಾಧ್ಯವಾಗುತ್ತದೆ ಎಂದರು.
ಮದುವೆ, ಜನ್ಮದಿನ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳಲ್ಲಿ ದುಂದುವೆಚ್ಚಮಾಡಿ ಕಾರ್ಯಕ್ರಮವನ್ನು ಮಾಡುತ್ತಾರೆ.ವಿಶೇಷ ದಿನದಲ್ಲಿ ಸವಿನೆನಪಿಗಾಗಿ ಗಿಡಗಳನ್ನು ನೆಟ್ಟರೆ ನೆನಪನ್ನು ಶಾಶ್ವತವಾಗಿ ಉಳಿಸುತ್ತದೆ. ಪರಿಸರ ಪ್ರಜ್ಞೆ ಇದ್ದಾಗ ಮಾತ್ರ ಸುಖ ಸಮದ್ಧಿಯಿಂದ ಬದುಕು ನಡೆಸಲು ಸಾಧ್ಯ, ಹೀಗಾಗಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಜಾಗೃತರಾಗುವುದರ ಜೊತೆಗೆ ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ಗಿಡ ನೆಡುವ ಜತೆಗೆ ಬೆಳೆದಿರುವ ಮರಗಳನ್ನು ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸಹ ನಿಮ್ಮ ಜತೆ ಕೈಜೋಡಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಬಸವರಾಜು, ಮನೋಹರ್, ಮುಖ್ಯಶಿಕ್ಷಕ ರಾಜೇಶ್, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.