ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರ ದಾಳಿಗಳು ನಡೆಯುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ತನಗೆ ಬಂದ ಅಭಿನಂದನಾ ಸಂದೇಶಗಳಿಗೆ ಉತ್ತರಿಸುವುದರಲ್ಲಿ ನಿರತರಾಗಿರುವ ನರೇಂದ್ರ ಮೋದಿ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರವಾಗಿ ಹತ್ಯೆಯಾದ ಭಕ್ತರ ಕುಟುಂಬಗಳ ಕಿರುಚಾಟವೂ ಕೇಳಿಸುತ್ತಿಲ್ಲ” ಎಂದು ಮೋದಿಯನ್ನು ಕುಟುಕಿದ್ದಾರೆ.
“ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಕಳೆದ 3 ದಿನಗಳಲ್ಲಿ 3 ಪ್ರತ್ಯೇಕ ಭಯೋತ್ಪಾದಕ ದಾಳಿ ಘಟನೆಗಳು ನಡೆದಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇನ್ನೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ” ಎಂದು ರಾಹುಲ್ ಟೀಕಿಸಿದ್ದಾರೆ.
“ಬಿಜೆಪಿ ಸರ್ಕಾರದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿರುವವರು ಏಕೆ ಸಿಕ್ಕಿ ಬೀಳುವುದಿಲ್ಲ ಎಂದು ದೇಶವು ಉತ್ತರವನ್ನು ಕೇಳುತ್ತಿದೆ” ಎಂದು ಹೇಳಿದ್ದಾರೆ.
बधाई संदेशों का जवाब देने में व्यस्त नरेंद्र मोदी को जम्मू-कश्मीर में निर्ममता से मौत के घाट उतार दिये गए श्रद्धालुओं के परिवारों की चीखें तक नहीं सुनाई दे रही हैं।
रियासी, कठुआ और डोडा में पिछले 3 दिनों में 3 अलग-अलग आतंकी घटनाएं हुई हैं लेकिन प्रधानमंत्री अब भी जश्न में मग्न…
— Rahul Gandhi (@RahulGandhi) June 12, 2024
“>
ಇನ್ನು ಕಾಂಗ್ರೆಸ್ ನಾಯಕ ಮತ್ತು ಮಾಧ್ಯಮ, ಪ್ರಚಾರ ವಿಭಾಗದ ಉಸ್ತುವಾರಿ ಪವನ್ ಖೇರಾ ಕೂಡಾ ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿದ್ದಾರೆ. “ಪಾಕಿಸ್ತಾನಿ ನಾಯಕರ ಶುಭಾಶಯಕ್ಕೆ ಪ್ರತಿಕ್ರಿಯಿಸಲು ಪ್ರಧಾನಿ ಮೋದಿ ಅವರಿಗೆ ಸಮಯವಿದೆ, ಆದರೆ ಕ್ರೂರ ಭಯೋತ್ಪಾದಕ ದಾಳಿಯನ್ನು ಖಂಡಿಸಲು ಸಮಯವಿಲ್ಲ” ಎಂದಿದ್ದಾರೆ.
“ಜಮ್ಮು ಮತ್ತು ಕಾಶ್ಮೀರವನ್ನು ಶಾಂತಿ ಮತ್ತು ಸಹಜ ಸ್ಥಿತಿಗೆ ತರುವ ಬಿಜೆಪಿಯ ಪೊಳ್ಳು ಹೇಳಿಕೆಗಳನ್ನು ಸಂಪೂರ್ಣವಾಗಿ ಬಹಿರಂಗಗೊಂಡಿದೆ. ಕಾಶ್ಮೀರ ಕಣಿವೆಯಲ್ಲಿ ಚುನಾವಣೆ ಎದುರಿಸಲು ಬಿಜೆಪಿ ತಲೆಕೆಡಿಸಿಕೊಳ್ಳದಿರುವುದು ಅವರ ‘ನಯಾ ಕಾಶ್ಮೀರ’ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರ ನೀತಿಯು ಹೀನಾಯವಾಗಿ ವಿಫಲವಾಗಿದೆ” ಎಂದು ಟೀಕಿಸಿದ್ದಾರೆ.
“2016ರಲ್ಲಿ ನಡೆದ ಪಠಾಣ್ಕೋಟ್ ದಾಳಿಯ ತನಿಖೆಗೆ ಮೋದಿ ಸರ್ಕಾರ ದರೋಡೆಕೋರ ಐಎಸ್ಐಗೆ ಆಹ್ವಾನ ನೀಡಿದ್ದು ನಿಜವಲ್ಲವೇ” ಎಂದು ಖೇರಾ ಪ್ರಶ್ನಿಸಿದ್ದಾರೆ.
“ಜಮ್ಮು ಕಾಶ್ಮೀರದಲ್ಲಿ 2,262 ಭಯೋತ್ಪಾದಕ ದಾಳಿಗಳು ನಡೆದಾಗಲೂ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಿದೆ. ಈ ದಾಳಿಯಲ್ಲಿ 363 ನಾಗರಿಕರು ಸಾವನ್ನಪ್ಪಿದರು ಮತ್ತು 596 ಯೋಧರು ಹುತಾತ್ಮರಾಗಿದ್ದಾರೆ” ಎಂದು ಖೇರಾ ಅಂಕಿ ಅಂಶ ಸಮೇತ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.