ವಿಶೇಷ ವರದಿ : ಶ್ರೀರಂಗನಾಥ್
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿ ಗ್ರಾಮದ ಮೈಸೂರು-ಹಾಸನ ಹೆದ್ದಾರಿ ಪಕ್ಕದ ಫೇವರಿಚ್ ಮೆಗಾ ಫುಡ್ ಪಾರ್ಕ್ ನಿಂದ ರೈತರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸ್ಥಳೀಯರಿಗೆ ಆಸರೆಯಾಗಬೇಕಾದ ಫುಡ್ ಪಾರ್ಕ್ ಈಗ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯವನ್ನು ಸಂಸ್ಕರಣೆ ಮಾಡದೇ, ರೈತರ ಜಮೀನಿಗೆ ಹಾಗೂ ಕೆರೆ ಕಟ್ಟೆಗಳಿಗೆ ನೇರವಾಗಿ ಬಿಡಲಾಗುತ್ತಿದೆ, ಆದ್ದರಿಂದ ಫುಡ್ ಪಾರ್ಕಿನ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ನಿಯಮವಿದ್ದರೂ, ಆದೇಶ ಗಾಳಿಗೆ ತೂರಿ ವಲಸಿಗರಿಗೆ ಆದ್ಯತೆ ನೀಡಲಾಗಿದೆ, ಇಲ್ಲಿ ಕೆಮಿಕಲ್ ಆಧಾರಿತ ತಂಪು ಪಾನೀಯಗಳನ್ನು ತಯಾರಿಸುತ್ತಿದ್ದು ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಟಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಶಾಸಕ ಹೆಚ್.ಟಿ. ಮಂಜು ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಘನ ತ್ಯಾಜ್ಯ ನೀರನ್ನು ಎಲ್ಲಂದರಲ್ಲಿ ಬಿಡದಂತೆ ಸೂಚನೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸಹ ಇಂದಿಗೂ ತ್ಯಾಜ್ಯ ನೀರು ಕೆರೆಕಟ್ಟೆಗಳಿಗೆ ಸೇರುತ್ತಿದೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಬಿ ಎಮ್ ನಾಗೇಶ್ ಮಾನವ ಹಕ್ಕುಗಳ ಅಯೋಗ ಹಾಗೂ ಪರಿಸರ ಇಲಾಖೆಗೆ ದೂರ ನೀಡಿದ ಹಿನ್ನೆಲೆಯಲ್ಲಿ ಕಳೆದ ಜೂ.14ರಂದು ಅಧಿಕಾರಿಗಳು ಸ್ಥಳ ಪರಿವೀಕ್ಷಣೆಗೆ ಬಂದ ಸಂದರ್ಭದಲ್ಲಿ ತ್ಯಾಜ್ಯ ನೀರು ಕೆರೆಕಟ್ಟೆಗಳಿಗೆ ಹರಿಯುತ್ತಿರುವುದು ಸಾಬೀತಾದರೂ ಕ್ರಮವಹಿಸದೇ ಕೈ ಚೆಲ್ಲಿದ್ದಾರೆಂದು ರೈತಸಂಘದ ಮಾಜಿ ಅಧ್ಯಕ್ಷರಾದ ಬಣ್ಣೇನಹಳ್ಳಿ ನಾಗೇಶ್, ಸಾಮಾಜಿಕ ಹೋರಾಟಗಾರ ಅರುಣ್, ಕರ್ನಾಟಕ ರಾಜ್ಯ ರೈತ ಸಂಘದ ಎಸ್ ಪಿ ರವಿ, ಎಮ್ ಡಿ ಯೋಗೇಶ್ ಮಾಕವಳ್ಳಿ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಕ್ರಮವಹಿಸಿ ಸ್ಥಳೀಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.