Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಸದರಾಗಿ ಮೋದಿ ಪ್ರಮಾಣ ವಚನ| ‘ಇಂಡಿಯಾ’ ಒಕ್ಕೂಟದಿಂದ ಸಂವಿಧಾನದ ಪ್ರತಿ ಪ್ರದರ್ಶಿನ

ನೂತನ ಸಂಸತ್‌ ಭವನ ಸೆಂಟ್ರಲ್ ವಿಸ್ಟಾದಲ್ಲಿ ಇಂದಿನಿಂದ(ಜೂನ್ 24) 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಗೊಂಡಿದೆ. ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು

ಪ್ರಮಾಣ ವಚನ ಸ್ವೀಕಾರದ ಸಂಪ್ರದಾಯದಂತೆ ಲೋಕಸಭೆಯ ನಾಯಕ ಹಾಗೂ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮೊದಲಿಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಲೋಕಸಭಾ ಸ್ಪೀಕರ್ ಮುಂದಿದ್ದ ಪೀಠದ ಮುಂದೆ ಬಂದು ನಿಂತರು. ಈ ವೇಳೆ ಎದುರು ಬದಿಯಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯರು ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುವ ಮೂಲಕ ‘ಚಾರ್ ಸೌ ಪಾರ್’ ಭಾಷಣವನ್ನು ನೆನಪಿಸಿದ ಪ್ರಸಂಗ ನಡೆಯಿತು.

ಸಂಸತ್‌ನ ಒಳಗೂ ಹೊರಗೂ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷದ ಸಂಸದರು

18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಇಂಡಿಯಾ ಮೈತ್ರಿಕೂಟದ ನಾಯಕರು ಜೊತೆಯಾಗಿ ಸಂಸತ್ ಪ್ರವೇಶಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ವೇಳೆ ಎಲ್ಲ ನಾಯಕರು ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡಿದ್ದರು. “ನಾವು ಸಂವಿಧಾನ ಉಳಿಸುತ್ತೇವೆ’, ‘ಪ್ರಜಾಪ್ರಭುತ್ವ ಉಳಿಸಿ’, ‘ಲಾಂಗ್ ಲೈವ್ ಕಾನ್‌ಸ್ಟಿಟ್ಯೂಷನ್” ಎಂಬ ಘೋಷಣೆಗಳನ್ನು ಕೂಡ ಕೂಗಿದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, “ಸಂವಿಧಾನ ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ಅದ್ದರಿಂದ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಂವಿಧಾನ ಪುಸ್ತಕ ಹಿಡಿದಿದ್ದೇವೆ. ಯಾವ ಶಕ್ತಿಯು ಭಾರತದ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ಸಾರುತ್ತಿದ್ದೇವೆ” ಎಂದರು.

ಜೂನ್ 26ರಂದು ಲೋಕಸಭಾ ಸ್ಪೀಕರ್ ಆಯ್ಕೆ ನಡೆಯಲಿದ್ದು, 27ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

‘ಸಂವಿಧಾನದ ಬದಲಾವಣೆಗೆ 400 ಸೀಟುಗಳು ಬೇಕು’ ಎಂದಿದ್ದ ಬಿಜೆಪಿಯ ನಾಯಕರು

ಬಿಜೆಪಿ ಈ ದೇಶದ ಸಂವಿಧಾನ ಬದಲಿಸಬೇಕಾದರೆ 400 ಸೀಟುಗಳು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗೆಲ್ಲಬೇಕಿದೆ ಎಂದು ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವು ಮುಖಂಡರು 2024ರ ಲೋಕಸಭಾ ಚುನಾವಣೆಗೂ ಮುನ್ನ ಹೇಳಿದ್ದರು.

ಇದು ಚುನಾವಣೆಯಲ್ಲಿ ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡಿತ್ತು. ಸಂವಿಧಾನ ಬದಲಾವಣೆ ಹೇಳಿಕೆಯು ಬಹುಮುಖ್ಯ ಪಾತ್ರ ವಹಿಸಿದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಿರುಗು ಬಾಣವಾಗಿತ್ತು. ಅಲ್ಲದೇ, 272ರ ಸರಳ ಬಹುಮತ ಪಡೆಯಲು ಕೂಡ ವಿಫಲವಾಗಿತ್ತು. ಸದ್ಯ ಎನ್‌ಡಿಎ ಮಿತ್ರ ಪಕ್ಷಗಳ ಬೆಂಬಲದಿಂದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!