ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಮತ್ತಷ್ಟು ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು ಆಯ್ಕೆ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ಮನವಿ ಮಾಡಿದರು. ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಪರ ಮಂಡ್ಯ ನಗರದ ವಿವಿಧೆಡೆ ಪ್ರಚಾರ ನಡೆಸಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರು ಕಡಿಮೆ ಮತಗಳಿಂದ ಸೋತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಶಕ್ತಿ ತುಂಬಲು ರವಿಶಂಕರ್ ಅವರನ್ನು ಗೆಲ್ಲಿಸಬೇಕು.ಕಳೆದ ಬಾರಿ ಸುಮಾರು 6 ಸಾವಿರಕ್ಕೂ ಅಧಿಕ ಪದವೀಧರ ಮತಗಳು ತಿರಸ್ಕೃತಗೊಂಡಿದ್ದವು. ಈ ಬಾರಿ ಆ ರೀತಿ ತಪ್ಪುಗಳಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಸರಳ, ಸಜ್ಜನಿಕೆಯ ವ್ಯಕ್ತಿತ್ವವುಳ್ಳ ರವಿಶಂಕರ್ ಅವರಿಗೆ ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಪರಿಷತ್ಗೆ ಹೋಗುವ ಅವಕಾಶ ಕೈ ತಪ್ಪಿದೆ.ಈ ಬಾರಿ ಹೆಚ್ಚಿನ ಪದವೀಧರರ ಮತದಾರರು ರವಿಶಂಕರ್ ಅವರ ಪರವಾಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಧನೆಯನ್ನು ನೋಡಿ, ಶಿಕ್ಷಣ ಕ್ಷೇತ್ರ ಹಾಗೂ ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳಿಂದ ಬಿಜೆಪಿಗೆ ಮತ ನೀಡುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ.ಸದಾನಂದ, ಚಂದಗಾಲು ಶಿವಣ್ಣ, ನಗರಾಧ್ಯಕ್ಷ ವಿವೇಕ್, ಹರ್ಷ, ಹನುಮಂತು, ಸೋಮಶೇಖರ್, ಪ.ನ.ಸುರೇಶ್, ಅನುರಾಧಾ, ಸುಜಾತಕೃಷ್ಣ ಮತ್ತಿತರರಿದ್ದರು.