ಅಣ್ಣೂರು ಸತೀಶ್
ಹಿರಿಯ ರಾಜಕಾರಣಿ ಜಿ.ಮಾದೇಗೌಡರು ಸರಳ, ಸಜ್ಜನಿಕೆ ಹಾಗೂ ವಿನಯವಂತಿಕೆಯ ವ್ಯಕ್ತಿತ್ವವಾಗಿತ್ತು. ಅವರಿಗೆ ಮುಂಗೋಪವಿತ್ತು ಆದರೆ ಅದು ಮುಂಗೋಪವಲ್ಲ ಸಾತ್ವಿಕ ಕೋಪ ಎನ್ನಬಹುದು, ಏಕೆಂದರೆ ಜನರ ಕೆಲಸಗಳನ್ನು ಯಾವ ಅಧಿಕಾರಿ ಮಾಡಿಕೊಡುತ್ತಿರಲಿಲ್ಲವೋ ಅವರ ಮೇಲೆ ಮಾತಿನ ಪ್ರಹಾರ ನಡೆಸುತ್ತಿದ್ದರು ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತೀ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 24ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಿಟ್ಟು ಎಂಬುದು ಮಾದೇಗೌಡರಿಗೆ ಈ ಮಣ್ಣಿನ ಗುಣವೇ ಆಗಿರುವುದರಿಂದ ಮಣ್ಣಿನ ಚೇತನದಿಂದ ಬಂದಿರುವ ನೈತಿಕ ಸಿಟ್ಟು ಇದಾಗಿತ್ತು, ಇವರ ಮಾತಿನಲ್ಲಿ ಒರಟುತನವಿತ್ತೇ ವಿನಃ ಭ್ರಷ್ಟತನವಿರಲಿಲ್ಲ, ಜಿಲ್ಲೆಯ ಸಹಕಾರಿ ಧುರೀಣ ಕೆ.ವಿ.ಶಂಕರಗೌಡ ಸೇರಿದಂತೆ ಬಹುತೇಕ ವ್ಯಕ್ತಿಗಳು ಕುಟುಂಬಕ್ಕೆ ವ್ಯಕ್ತಿಯಾಗಲಿಲ್ಲ ಜಗಕ್ಕೇ ಜ್ಯೋತಿ ಆಗಿದ್ದರು ಎಂದು ಶ್ಲಾಘಿಸಿದರು.
ಕರ್ನಾಟಕ ಸರ್ಕಾರ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗದಗ ಕೆ.ಎಚ್.ಪಾಟೀಲ್ ಪ್ರತಿಷ್ಠಾನದ ಅಧ್ಯಕ್ಷ, ಮಾಜಿ ಶಾಸಕ ಡಿ.ಆರ್.ಪಾಟೀಲ್ ಅವರಿಗೆ ಡಾ.ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಹಾಗೂ ಮಳವಳ್ಳಿ ತಾಲ್ಲೂಕು ಮಲ್ಲಿಗಹಳ್ಳಿ ಗ್ರಾಮದ ಸಾವಯವ ಕೃಷಿಕ ಶ್ರೀಪಾದ ಪಿ ಆಚಾರ್ಯ ಅವರಿಗೆ ಸಾವಯವ ಕೃಷಿಕ ಪ್ರಶಸ್ತಿ ಜೊತೆ ₹25 ಸಾವಿರ ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.
ಶಾಸಕ ಪಿ.ರವಿಕುಮಾರ್, ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ, ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಎಜುಕೇಶನ್ ಟ್ರಸ್ಟ್ನ ಪದಾಧಿಕಾರಿಗಳು, ಜಿ.ಮಾದೇಗೌಡ ಅಭಿಮಾನಿ ಬಳಗದವರು ಹಾಗೂ ಶಿಕ್ಷಕರು, ಸಾಹಿತಿಗಳು ಸೇರಿದಂತೆ ಅವರ ಶಿಷ್ಯ ವೃಂದದವರು ಭಾಗವಹಿಸಿದ್ದರು.