ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೇ ಜು.14ರಂದು ಕರೆದಿರುವ ಸರ್ವಪಕ್ಷಸಭೆ ಹಾಗೂ ಜು.15ರಂದು ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದ ಸಂಸದರು ಹಾಗೂ ಶಾಸಕರು ಕಾವೇರಿ ಕುರಿತು ಸಮಗ್ರವಾಗಿ ಚರ್ಚಿಸಿ ನಿರ್ಣಯಕ್ಕೆ ಬರಬೇಕೆಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮನವಿ ಸಲ್ಲಿಸಿದೆ.
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಮಿತಿಯ ನಿಯೋಗ ಮನವಿ ಮಾಡಿತು.
ಈಗಾಗಲೇ ಕಾವೇರಿ ನೀರು ನಿಯಂತ್ರಣ ಸಮಿತಿ ತಿಂಗಳು ಜು.30ರವರೆಗೆ ಪ್ರತಿನಿತ್ಯ ತಲಾ 1 ಟಿಎಂಸಿ ನೀರು ಬಿಡಬೇಕೆಂದು ಶಿಫಾರಸ್ಸು ಮಾಡಿದೆ. ಹೀಗಿರುವ ಕಾವೇರಿ ಕೊಡದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡುವುದು ಸಾಧ್ಯವಿಲ್ಲವೆಂದಿರುವ ರಾಜ್ಯ ಸರ್ಕಾರ, ಸರ್ವಪಕ್ಷ ಸಭೆ ಹಾಗೂ ಜು.15ರಿಂದ ಪ್ರಾರಂಭವಾಗಿರುವ ವಿಧಾನಸಭಾ ಅಧಿವೇಶನದಲ್ಲಿ ಸಮಗ್ರವಾದ ಚರ್ಚೆಯನ್ನು ಮಾಡಬೇಕೆಂದು ಒತ್ತಾಯಿಸಲಾಗಿದೆ.
ಕಾವೇರಿ ಕೊಳ್ಳದ ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಬೆಳೆ ಪರಿಹಾರ ಕೂಡ ಸರ್ಕಾರ ಸರಿಯಾಗಿ ನೀಡಲಿಲ್ಲ. ಇರುವಷ್ಟು ಬೆಳೆಯನ್ನಾದರೂ ಉಳಿಸಲು ಪ್ರಯತ್ನ ಮಾಡಬೇಕು. ಪ್ರಾಧಿಕಾರಗಳು ಆದೇಶ ಮಾಡುವ ಮೊದಲು ಕಾವೇರಿ ಕೊಳ್ಳದದ ಪ್ರದೇಶಕ್ಕೆ ವೀಕ್ಷಣೆ ಮಾಡಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ಸಂಸದರು ಮತ್ತು ಶಾಸಕರು ಸಭೆ ಮಾಡಿ. ಕಾವೇರಿಯ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ.
ನಿಯೋಗದಲ್ಲಿ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಸುನಂದ ಜಯರಾಮ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್ ಸಿ. ಮಂಜುನಾಥ್, ಮೂಲ ರೈತ ಸಂಘಟನೆಯ ಇಂಡುವಾಳು ಚಂದ್ರಶೇಖರ್ ಹಾಗೂ ಮುದ್ದೇಗೌಡ ಹಾಜರಿದ್ದರು.