ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಕಳೆದ ಭಾನುವಾರ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗೈರಾಗಿದ್ದು, ಸರಿಯಾದ ಬೆಳವಣಿಗೆಯಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಶಿವನಂಜು ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡಬೇಕಿದ್ದ ಕುಮಾರಸ್ವಾಮಿ ಅವರು ಸರ್ವಪಕ್ಷ ಸಭೆಗೆ ಗೈರಾಗುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮುಂಚೆ ‘ಕಾವೇರಿಗಾಗಿ ಕುಮಾರಣ್ಣ ದೇಶಕ್ಕೆ ಮೋದಿ’ ಎಂದು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದವರು, ಈಗ ಸಮಸ್ಯೆಗೆ ಬೆನ್ನು ತೋರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ಜೊತೆ ಮನಸ್ತಾಪ ಇದ್ರೆ ಅದನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ, ಆದರೆ ಮಂಡ್ಯ ಜಿಲ್ಲೆ ಹಿತಕಾಯುವ ಉದ್ದೇಶದಿಂದ ಸರ್ವಪಕ್ಷಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಉದ್ದೇಶಕ್ಕೆ ಸಭೆ ಕರೆದಿರಲಿಲ್ಲ, ರಾಜ್ಯದ ಉಳಿವಿಗೆ ಕಾವೇರಿ ಉಳಿಸಲು ಸಭೆ ಕರೆದಿದ್ದರು ಎಂದು ತಿರುಗೇಟು ನೀಡಿದರು.
ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ಕೀಲಿ ಕೈ ಕೇಂದ್ರದ ಕೈಯಲ್ಲಿ ಇದೆ ಎಂದವರು, ಈಗ ಯಾರ ಬಳಿಯಲ್ಲಿ ಕೀಲಿ ಕೈ ಇದೆ ಎಂದು ಜನತೆಗೆ ತಿಳಿಸಬೇಕೆಂದರು. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ, ಕಾವೇರಿ ಸಮಸ್ಯೆ ಬಗೆಹರಿಸುವುದಾಗಿ ನೀಡಿರುವ ಭರವಸೆಯಂತೆ ಕುಮಾರಸ್ವಾಮಿ ಅವರು ನಡೆದುಕೊಳ್ಳಲಿ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ ಎಂ ದ್ಯಾವಪ್ಪ, ಶಿವನಂಜು, ಶಿವರುದ್ರ, ದೇವರಾಜು, ಪ್ರಕಾಶ ಉಪಸ್ಥಿತರಿದ್ದರು.