ಕೆ.ಆರ್.ಪೇಟೆ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಬುಧವಾರ ಚಾಲನೆ ನೀಡಿದರು.
ತಾಲೂಕಿನ ಸಮಸ್ತ ಕಬ್ಬು ಬೆಳೆಗಾರರು, ಕಾರ್ಖಾನೆಯ ಸಿಬ್ಬಂದಿಗಳು ಹಾಗೂ ಇತರೆ ಗಣ್ಯರ ಸಮಕ್ಷಮದಲ್ಲಿ ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ ಪುರಸ್ಕಾರ ನಡೆಸಿ,ಯಂತ್ರೋಪಕರಣಗಳು ಹಾಗೂ ಕಂಪ್ಯೂಟರ್ ವೇಬ್ರಿಡ್ಜ್ ಗೆ ಪೂಜೆ ಸಲ್ಲಿಸಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದರು.
ಜುಲೈ 31ರಿಂದ ಕಾರ್ಖಾನೆಯು ಅಧಿಕೃತವಾಗಿ ಕಬ್ಬು ಅರೆಯಲಿದ್ದು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಬ್ಬು ಕಟಾವು ಮಾಡಲು ಯಾವುದೇ ತೊಂದರೆಯಾಗದಂತೆ 05 ಕೋಟಿ ರೂಪಾಯಿ ಮುಂಗಡ ಹಣ ನೀಡಿ ಕಬ್ಬು ಕಟಾವು ಮಾಡುವ ಆಳುಗಳನ್ನು ಹೊರವ್ಯಾಪ್ತಿಯಿಂದ ಹಾಗೂ ಸ್ಥಳೀಯ ಕಬ್ಬು ಕಟಾವು ಗುಂಪುಗಳೊಂದಿಗೆ ಒಪ್ಪಿಗೆ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಖಾನೆಯು 8ಲಕ್ಷ ಟನ್ ಕಬ್ಬು ಅರೆಯಲು ಸನ್ನದ್ದವಾಗಿದೆಯಾದರೂ ಕಳೆದ ಸಾಲಿನಲ್ಲಿ ಉಂಟಾದ ತೀವ್ರ ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ನಾಲ್ಕುವರೆ ಲಕ್ಷ ಟನ್ ಕಬ್ಬಿನ ಲಭ್ಯತೆಯಿದೆ. ಪ್ರಸ್ತುತ ಕೊರತೆಯಿರುವ ಮೂರೂವರೆ ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯಲು ಪೂರಕವಾದ ಕಬ್ಬಿನ ತಳಿಯನ್ನು ಅಭಿವೃದ್ಧಿಪಡಿಸಿ ಬಿತ್ತನೆಯನ್ನು ಕಾರ್ಖಾನೆಯ ವತಿಯಿಂದ ನೀಡಲಾಗುತ್ತಿದೆ. ರೈತ ಭಾಂದವರು ವೈಜ್ಞಾನಿಕವಾಗಿ ಕಬ್ಬಿನ ಬೇಸಾಯ ಮಾಡಿ ಕಬ್ಬಿನ ಬೆಳೆಯನ್ನು ಉದ್ಯಮವಾಗಿ ಸ್ವೀಕರಿಸಿ ಹೆಚ್ಚು ಇಳುವರಿ ಪಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಬೆಳೆದು ಲಾಭಧಾಯಕ ಉದ್ಯಮವನ್ನಾಗಿ ಮಾಡಿಕೊಂಡು ಹೆಚ್ಚು ಲಾಭಗಳಿಸಿ ನೆಮ್ಮದಿಯ ಜೀವನ ನಡೆಸಬೇಕು ಎಂದು ರವಿರೆಡ್ಡಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಅಧಿಕಾರಿಗಳಾದ ಮೇಯನ್, ಅಶೋಕ್ ಕುಮಾರ್, ಕೆ. ಬಾಬುರಾಜ್, ಮೋಹನ್, ಆರ್.ಇ.ಕುಮಾರ್, ನವೀನ್, ರವಿಚಂದ್ರನ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪ್ರಗತಿಪರ ಕಬ್ಬು ಬೆಳೆಗಾರರಾದ ಬೋರಾಪುರ ಮಂಜುನಾಥ್, ರಾಮಕೃಷ್ಣೆಗೌಡ, ರಾಮೇಗೌಡ, ಬಲರಾಮೇಗೌಡ, ಕಾಯಿ ಮಂಜೇಗೌಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.