ಬೋಧೀಸತ್ವ ಡಾ.ಬಿ.ಆರ್.ಅಂಬೇಡ್ಕರ್ರವರು ದೀಕ್ಷೆ ಪಡೆದು 2031ರ ವೇಳೆಗೆ 75ವರ್ಷಗಳು ಆಗುತ್ತಿದ್ದು ಈ ಸಂಭ್ರಮದ ಪ್ರಯುಕ್ತ ಭಾರತದಲ್ಲಿ ಕೋಟ್ಯಾಂತರ ಮೂಲನಿವಾಸಿಗಳು ಬೌದ್ಧ ಧರ್ಮಕ್ಕೆ ಮರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಆ.15ರಂದು ಬೆಳಿಗ್ಗೆ 11.30ಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಿಂದ ತೆರೆದ ಬೆಳ್ಳಿರಥದಲ್ಲಿ ಗೌತಮ ಬುದ್ಧರ ಪ್ರತಿಮೆ ಮೆರವಣಿಗೆ, ಪುಷ್ಪಾರ್ಚನೆ ಹಾಗೂ ಬೃಹತ್ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುದ್ದ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಗೌತಮ ಬುದ್ಧರ ರಥದ ಮೆರವಣಿಗೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡುವರು, ಮೆರವಣಿಗೆ ಹಾಗೂ ಬೃಹತ್ ಬೈಕ್ ಜಾಥಾವು ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆಯವರೆಗೆ ಸಾಗಲಿದೆ, ಈ ವೇಳೆ ಡೊಳ್ಳುಕುಣಿತ, ತಮಟೆ, ನಗಾರಿ ವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಒಂದು ಸಾವಿರ ಯುವಕರು ಬೈಕ್ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆಂದರು.
ಮಂಡ್ಯ ಶಾಸಕ ಪಿ.ರವಿಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಳ್ಳೆಗಾಲದ ಜೇತವನ ಬುದ್ಧ ವಿಹಾರದ ಮನೋರಕ್ಕಿತ ಭಂತೇಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜನ ಬಾಲದಂಡಿ, ನಿವೃತ್ತ ಎ.ಡಿ.ಜಿ.ಪಿ ಡಾ.ಸುಭಾಷ ಭರಣಿ, ಪ್ರೊ. ಮಹೇಶಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್, ಡಾ.ಸುರೇಂದ್ರ, ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿದತ್ತ ಥೇರಾ, ಪ್ರೊ. ತುಕಾರಾಮ್, ಮೂಡ್ನಾಕೂಡು ಚಿನ್ನಸ್ವಾಮಿ, ಎಂ.ಸಿ.ಶಿವರಾಜ್, ದರ್ಶನ್ ಸೋಮಶೇಖರ್ ಸೇರಿದಂತೆ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆಂದರು.
ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಅಂಬೇಡ್ಕರ್ ಸಂಘಟನೆಗಳು, ನೌಕರರು, ನಿವೃತ್ತ ನೌಕರರು, ಅಧಿಕಾರಿಗಳು, ಪ್ರಗತಿಪರ ಸಂಘಟನೆಗಳು ಮತ್ತು ಮುಖಂಡರು, ಬುದ್ದ ದಮ್ಮ ಅನುಯಾಯಿಗಳು, ಅಭಿಮಾನಿಗಳು ಸಮ ಸಮಾಜದ ಪ್ರತಿಯೊಬ್ಬ ಮೂಲ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬೌದ್ದ ಬಿಕ್ಕು ಧಮ್ಮವೀರ ಬಂತೆ, ಮುಖಂಡರಾದ ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗರಾಜು, ಅಮ್ಜದ್ ಪಾಷ, ಪ್ರದೀಪ್ ಗೌಡ, ಬೆಂಜಮಿನ್ ಥಾಮಸ್, ಗುರಪ್ಪ ಹಾಗೂ ಲೋಕೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.