ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ದೇಶವು ಇಂದು ಕಮಲದ (ಬಿಜೆಪಿಯ) ಚಿಹ್ನೆಯನ್ನು ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ. ಅದನ್ನು ಆರು ಮಂದಿ ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಆರು ಜನ ಚಕ್ರವ್ಯೂಹದಲ್ಲಿ ಸಿಲುಕಿಸಿ ಹತ್ಯೆ ಮಾಡಿದ್ದರು. ಇದರ ಬಗ್ಗೆ ನಾನು ಸ್ವಲ್ಪ ಸಂಶೋಧನೆ ಮಾಡಿ ಬಂದಿದ್ದೇನೆ. ಚಕ್ರವ್ಯೂಹಕ್ಕೆ ಪದ್ಮ ಎಂದೂ ಕರೆಯಲಾಗುತ್ತದೆ. ಅಂದರೆ ಕಮಲ ರಚನೆ ಎಂದು ನನಗೆ ಗೊತ್ತಾಯಿತು. ‘ಚಕ್ರವ್ಯೂಹ’ ಕಮಲದ ಆಕಾರದಲ್ಲಿದೆ” ಎಂದು ಬಿಜೆಪಿ ನಾಯಕರನ್ನು ರಾಹುಲ್ ಗಾಂಧಿ ಕುಟುಕಿದ್ದಾರೆ.
“21ನೇ ಶತಮಾನದಲ್ಲಿ, ಹೊಸ ‘ಚಕ್ರವ್ಯೂಹ’ ರೂಪುಗೊಂಡಿದೆ. ಅದು ಕಮಲದ ರೂಪದಲ್ಲಿದೆ. ಅದನ್ನು ಪ್ರಧಾನಿ ತಮ್ಮ ಎದೆಯ ಮೇಲೆ ಧರಿಸಿಕೊಂಡಿರುತ್ತಾರೆ. ಅಂದು ಅಭಿಮನ್ಯುವಿನೊಂದಿಗೆ ಏನು ಮಾಡಲಾಗಿದೆಯೋ ಅದನ್ನೇ ಇದು ನಮ್ಮ ದೇಶದ ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
LIVE: LoP Rahul Gandhi speaks on Budget 2024 | 18th Lok Sabha https://t.co/Cko84BDBVW
— Rahul Gandhi (@RahulGandhi) July 29, 2024
“>
“ಅಭಿಮನ್ಯುವನ್ನು ಆರು ಜನರು ಕೊಂದರು. ಈ ಆಧುನಿಕ ಯುಗದ ಚಕ್ರವ್ಯೂಹವನ್ನು ಕೇಂದ್ರದಲ್ಲಿ ಆರು ಮಂದಿ ನಿಯಂತ್ರಿಸುತ್ತಾರೆ. ಅವರೇ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ” ಎಂದು ರಾಹುಲ್ ಗಾಂಧಿ ಅಭಿಪ್ರಾಯಿಸಿದರು.
ರಾಹುಲ್ ಗಾಂಧಿ ಭಾಷಣಕ್ಕೆ ಸ್ಪೀಕರ್ ಓಂ ಬಿರ್ಲಾ ಅಸಮ್ಮತಿ ಸೂಚಿಸುತ್ತಿದ್ದಂತೆ, “ನೀವು ಬಯಸಿದರೆ, ನಾನು ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ), ಅಂಬಾನಿ ಮತ್ತು ಅದಾನಿ ಹೆಸರನ್ನು ಬಿಟ್ಟುಬಿಡುತ್ತೇನೆ. ಕೇವಲ ಮೂರು ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
“ನೀವು ನಿರ್ಮಿಸಿರುವ ‘ಚಕ್ರವ್ಯೂಹ’ವು ಕೋಟಿಗಟ್ಟಲೆ ಜನರಿಗೆ ಹಾನಿ ಉಂಟು ಮಾಡುತ್ತಿದೆ. ನಾವು ಈ ‘ಚಕ್ರವ್ಯೂಹ’ವನ್ನು ಒಡೆಯುತ್ತೇವೆ. ಚಕ್ರವ್ಯೂಹವನ್ನು ಒಡೆಯಲು ನಮ್ಮ ಬಳಿ ಇರುವ ಪ್ರಬಲ ಮಾರ್ಗ ಜಾತಿ ಗಣತಿಯಾಗಿದೆ” ಎಂದು ರಾಹುಲ್ ಹೇಳಿದರು.
“ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಬೇಕೆಂದು ನಿರ್ಧರಿಸಿದರೆ, ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಸತತ ಮೂರು ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಕಾಲೆಳೆದರು.
ಕೇಂದ್ರ ಬಜೆಟ್ ಅನ್ನು ಟೀಕಿಸಿದ ರಾಹುಲ್
ಇನ್ನು ಜುಲೈ 22ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಅನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. “ಬಜೆಟ್ ತೆರಿಗೆ ಭಯೋತ್ಪಾದನೆಯ ಸಮಸ್ಯೆಯನ್ನು ಪರಿಹರಿಸಿಲ್ಲ ಮತ್ತು ಅದು ಸಣ್ಣ ಉದ್ಯಮಗಳಿಗೆ ತೀವ್ರವಾಗಿ ಹಾನಿ ಮಾಡಿದೆ” ಎಂದು ಹೇಳಿದರು.
“ಈ ಬಜೆಟ್ ಈ ‘ಚಕ್ರವ್ಯೂಹ’ದ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಈ ಬಜೆಟ್ ಈ ದೇಶದ ರೈತರಿಗೆ ಸಹಾಯ ಮಾಡುತ್ತದೆ, ಈ ದೇಶದ ಯುವಕರಿಗೆ ಸಹಾಯ ಮಾಡುತ್ತದೆ, ಈ ದೇಶದ ಕಾರ್ಮಿಕರಿಗೆ, ಈ ದೇಶದ ಸಣ್ಣ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ನಾನು ನೋಡಿದ್ದು ಈ ಬಜೆಟ್ನ ಏಕೈಕ ಗುರಿ ರಾಜಕೀಯ ಏಕಸ್ವಾಮ್ಯವಾಗಿದೆ” ಎಂದು ಬಜೆಟ್ ಅನ್ನು ಟೀಕಿಸಿದರು.