ನಾಗಮಂಗಲ ಸಾಹಿತ್ಯ ಲೋಕದ ದೊಡ್ಡ ನೆಲೆಯಾಗಿದೆ. ಇಲ್ಲಿ ಕನ್ನಡದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರಿದ್ದಾರೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಮೀರಾಶಿವಲಿಂಗಯ್ಯ ಅಭಿಪ್ರಾಯ ಪಟ್ಟರು.
ನಾಗಮಂಗಲದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಬಿ ಎಂ ಶ್ರೀಕಂಠಯ್ಯ, ಜನಪದ ಚೇತನ ಎಚ್ಎಲ್ ನಾಗೇಗೌಡರು ಜನಿಸಿದ್ದಾರೆ. ಈ ನಾಗಮಂಗಲ ಸಾಹಿತ್ಯ ಲೋಕದ ಸಂಪತ್ ಭರಿತವಾದ ತಾಲೂಕು ಇಲ್ಲಿ ಬೆಳೆದಂತಹ ಪ್ರತಿಯೊಂದು ಸಾಹಿತ್ಯದ ಕೃಷಿ ಬಹಳ ಅಚ್ಚುಮೆಚ್ಚಿನದ್ದಾಗಿದೆ ಎಂದು ಸ್ಮರಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಹೆಮ್ಮೆಯ ಕೂಸು ಈ ಕನ್ನಡ ಸಾಹಿತ್ಯ ಪರಿಷತ್ತು, ಇದರ ಬೆಳವಣಿಗೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದೆ ಡಿಸೆಂಬರ್ ನಲ್ಲಿ ನಡೆಯುವಂತಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜವಾಬ್ದಾರಿಯುತವಾದ ಕೆಲಸಗಳು ನಮ್ಮೆಲ್ಲರ ಮೇಲಿದೆ, ಇದರ ಬಗ್ಗೆ ಗಮನ ಹರಿಸಬೇಕಾಗಿದೆ, ನಾಗಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಚಂದ್ರಶೇಖರ್ ಅವರು ಹೆಚ್ಚು ಶ್ರಮವಹಿಸಲಿ ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್, ನನಗೆ ಕನ್ನಡ ಸಾಹಿತ್ಯದ ಸೇವೆ ಮಾಡುವ ಎರಡನೇ ಅವಕಾಶ ಸಿಕ್ಕಿದ್ದು, ನಾನು ಹೆಚ್ಚು ಶ್ರಮವಹಿಸಿ ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತೇನೆ. ಕಳೆದ ಬಾರಿ ಅಧ್ಯಕ್ಷನಾಗಿದ್ದಾಗ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಗಮಂಗಲ ತಾಲೂಕು ಮಟ್ಟದಲ್ಲಿ ನಡೆಸಿದ್ದೆ ಹಾಗೂ ನಾಗಮಂಗಲದಲ್ಲಿ ಹೆಚ್ಚಿನದಾದ ಕನ್ನಡ ಸಾಹಿತ್ಯ ಪರಿಷತ್ ಸೇವೆಗೆ ಎಲ್ಲಾ ಆಸಕ್ತ ಕನ್ನಡ ಅಭಿಮಾನಿಗಳನ್ನ ಜೊತೆಯಲ್ಲಿ ಕೊಂಡೊಯ್ಯುತ್ತೇನೆ ಎಂದರು.
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಹೆಚ್ಚು ಕೆಲಸವನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡುವುದರ ಮೂಲಕ ಹೆಚ್ಚಿನ ಜವಾಬ್ದಾರಿ ನೀಡುವಂತೆ ಸಂಚಾಲಕರಲ್ಲಿ ಮನವಿ ಮಾಡಿದರು
ಆದಿಚುಂಚನಗಿರಿ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹರ್ಷ, ಕೃಷ್ಣೆಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು.