ಮಂಡ್ಯ ಜಿಲ್ಲಾಸ್ಪತ್ರೆಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಶನಿವಾರ ಮುಂಜಾನೆ ದಿಢೀರ್ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜನಶಕ್ತಿ ಸಂಘಟನೆ ಸಿದ್ದರಾಜು ಕೆಲವು ಪ್ರಮುಖ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮುಖ್ಯವಾಗಿ ಹೆರಿಗೆ ವಾರ್ಡ್ ಗಳಲ್ಲಿ ಗರ್ಭಿಣಿಯರಿಗೆ ಸರಿಯಾದ ಸೌಲಭ್ಯವಿಲ್ಲ, ಶೌಚಾಲಯಗಳು ಸರಿ ಇಲ್ಲ ಹೆರಿಗೆ ವಾರ್ಡನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು.
ಎಮರ್ಜೆನ್ಸಿ ಘಟಕವು ಬಹಳ ಚಿಕ್ಕದಾಗಿದ್ದು ಅದನ್ನು ವಿಸ್ತಾರ ಮಾಡಬೇಕು, ಇಲ್ಲಿ ಕಾರ್ಯನಿರ್ವಹಿಸುವಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚಾಗಿರುತ್ತಾರೆ. ಅಲ್ಲಿ ಹಿರಿಯ ವೈದ್ಯರು ಹಾಜರಿರುವಂತೆ ನೋಡಿಕೊಳ್ಳಬೇಕು. ಶಸ್ತ್ರಚಿಕಿತ್ಸೆ ನಂತರ ರೋಗಿಯನ್ನು ICU ವಾರ್ಡ್ ಗೆ ಸಿಪ್ಟ್ ಮಾಡುವ ಮಾರ್ಗವನ್ನು ದುರಸ್ತಿಪಡಿಸಬೇಕು. ಶಸ್ತ್ರಚಿಕಿತ್ಸೆಗೆ ಒಳಪಟ್ಟ ರೋಗಿಗೆ ಹೊಲಿಗೆ ಬಿಟ್ಟು ಹೋಗುವ, ಪ್ರಾಣಕ್ಕೆ ತೊಂದರೆಯಾಗುವ ಘಟನೆಗಳು ಸಂಭವಿಸುತ್ತಿದ್ದು, ಅವು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಬೇಕು, ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಸೆಕ್ಯುರಿಟಿ ಗಾರ್ಡ್ ಗಳನ್ನು ಅದಷ್ಟು ಬೇಗ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಮಿಮ್ಸ್ ನಿರ್ದೆಶಕರೊಂದಿಗೆ ಮಾತನಾಡಿ, ಹಂತ ಹಂತವಾಗಿ ಇಷ್ಟು ಸಮಸ್ಯೆಗಳನ್ನು ಅದಷ್ಟು ಬೇಗ ಸರಿಪಡಿಸುವಂತೆ ನಿರ್ದೇಶನ ನೀಡಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರ ಗಮನಕ್ಕೂ ತಂದು ಸರಿಪಡಿಸುವ ಭರವಸೆಯನ್ನು ನೀಡಿದರು.