ಹಿಂದಿನ ಕಾಲದಲ್ಲಿ ವಿದ್ಯಾಬ್ಯಾಸಕ್ಕೆಂದು ಹೆಚ್ಚಿನ ಆಯ್ಕೆಯ ವಿಷಯಗಳು ಸಿಗುತ್ತಿರಲಿಲ್ಲ, ಆದರೆ ಈಗಿನ ದಿನಗಳಲ್ಲಿ ಮಕ್ಕಳಿಗೆ ಬಹಳಷ್ಟು ಆಯ್ಕೆಗಳಿವೆ. ಆದ್ದರಿಂದ ಮಕ್ಕಳು ತಮ್ಮ ಅಭಿರುಚಿಯ ವಿಷಯದ ಬಗ್ಗೆ ಆಯ್ಕೆ ಮಾಡಿಕೊಂಡು ವಿದ್ಯಾಬ್ಯಾಸ ಮಾಡಬೇಕೆಂದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್ ಮಧು ಬಂಗಾರಪ್ಪ ಸಲಹೆ ನೀಡಿದರು.
ಮಂಡ್ಯ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಜೇಷನ್ ಹಾಗೂ ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಶುಕ್ರವಾರ ಮಂಡ್ಯ ನಗರದ ಎ ಅಂಡ್ ಎ ಕನ್ವೆನ್ನನ್ ಹಾಲ್ ನಲ್ಲಿ ”ಅಧ್ಯಾಪನ ವಿಜ್ಞಾನೋತ್ಸವ 2024″ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಅವರ ಜೀವನ ರೂಪಿಸಲು ವೈದ್ಯ, ಇಂಜಿನಿಯರ್, ವಿಜ್ಞಾನಿ, ಹಾಡುಗಾರಿಕೆ, ರಾಜಕೀಯ ಸೇರಿದಂತೆ ಹಲವಾರು ಉತ್ತಮ ರಂಗಗಳಿವೆ, ಅವುಗಳನ್ನು ಅವರಿಗೆ ಪರಿಚಯಿಸಿಕೊಡಿ ಇದರಿಂದ ಅವರು ತಮ್ಮ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡಲಿ ಎಂದರು. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಗ್ರಹಿಕೆಯ ಶಕ್ತಿ ಹೆಚ್ಚಿರುತ್ತದೆ. ಜ್ಞಾನ ಗಳಿಸುವ ದಾರಿಯನ್ನು ಶಿಕ್ಷಕರು ಮಾಡಿಕೊಡಬೇಕು ಎಂದರು.
ರಾಜ್ಯದಲ್ಲಿ ಸುಮಾರು 60,000 ಸರ್ಕಾರಿ ಶಾಲೆಗಳಿವೆ. 56 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ 4 ವರ್ಷಗಳಲ್ಲಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಿಸಿಯೂಟ ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ 4 ವರ್ಷಗಳಲ್ಲಿ 55 ಲಕ್ಷ ಮಕ್ಕಳ ದಾಖಲಾತಿ ಮಾಡಲು ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ಖಾಸಗಿ ಹಾಗೂ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 05 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಉತ್ತಮ ಬಿ.ಇ.ಒ ಮಹಾದೇವ ಅವರು ಉತ್ತಮ ಶಾಲೆ ಕಾರ್ಮೆಲ್ ಕಾನ್ವೆಂಟ್, ಉತ್ತಮ ವಿಜ್ಞಾನ ಶಿಕ್ಷಕ ಮೂರ್ತಿ ಪಿ.ವಿ.ಎನ್, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ ಉದಯ, ಜಿ. ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಬೆಂಗಳೂರು ಸೈನ್ಸ್ ಫಾರ್ ರೂರಲ್ ಇಂಡಿಯಾ, ಐ.ಐಎಸ್.ಸಿ ಇಸ್ರೋ ಹಿರಿಯ ವಿಜ್ಞಾನಿ ಪಿ.ವಿ ಎನ್ ಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.