ಮಳವಳ್ಳಿ ತಾಲ್ಲೂಕಿನ ಪ್ರಸಿದ್ಧ ಶಿವನಸಮುದ್ರ ಗಗನಚುಕ್ಕಿ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಿ, ಇದೇ ತಿಂಗಳು ಜಲಪಾತೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಬೆಳಕವಾಡಿ ಸಮೀಪದ ಶಿವನಸಮುದ್ರ (ಬ್ಲಫ್) ಗ್ರಾಮದ ಲಕ್ಷದ್ವೀಪ ಹೋಟೆಲ್ ನಲ್ಲಿ ಭಾನುವಾರ ಗಗನಚುಕ್ಕಿ ಜಲಪಾತೋತ್ಸವದ ಸಿದ್ದತೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಗಗನಚುಕ್ಕಿ ಜಲಪಾತೋತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ವೇದಿಕೆ ಕಾರ್ಯಕ್ರಮ, ಜಾನಪದ, ರಸಮಂಜರಿ, ಹಾಸ್ಯ, ಕಾಮಿಡಿ ಕಿಲಾಡಿಗಳು ಸೇರಿದಂತೆ ವಿವಿಧ ಮನೋರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಸಾರ್ವಜನಿಕರಿಗೆ ಅಯೋಜಿಸಲಾಗುವುದು, ಸದ್ಯದಲ್ಲೇ ದಿನಾಂಕ ಪ್ರಕಟ ಮಾಡಲಾಗುವುದು ಎಂದರು.
ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು, ವಾಹನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ, ನೀರಿನ ವ್ಯವಸ್ಥೆ ಮಾಡಲಾಗುವುದು, ವಿದ್ಯುತ್ ದೀಪಾಲಂಕಾರ, ಲೈಜರ್ ವ್ಯವಸ್ಥೆ ಜತೆಗೆ ರೊಟ್ಟಿ ಕಟ್ಟೆಯಿಂದ ವೇದಿಕೆವರೆಗೂ ರಸ್ತೆ ಬದಿಯಲ್ಲಿ ಜಾನಪದ ಸೊಗಡು ಹೊಂದಿರುವ ಚಿತ್ರಗಳೊಂದಿಗೆ ಸ್ವಾಗತ ಫಲಕಗಳನ್ನು ಹಾಕಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿ ಕೆ.ಆರ್.ಎಸ್ ತುಂಬಿರುವುದರಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಮಾಡುವುದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದೆ ಮಳೆಯ ಪ್ರಮಾಣ ನೋಡಿಕೊಂಡು ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದರು.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಶೇಕ್ ತನ್ವೀರ್ ಆಸೀಫ್, ಎಸಿ ಶಿವಮೂರ್ತಿ, ತಹಶೀಲ್ದಾರ್ ಎನ್. ಕೆ. ಲೋಕೇಶ್, ತಾ.ಪಂ.ಇಒ ಶ್ರೀನಿವಾಸ್, ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.