ಗುರು ದೇವೋತ್ಸವ 2024 ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಕಾರ್ಯಕ್ರಮವು ಸೆ.14 ರಿಂದ ಸೆ.16ರವರೆಗೆ ಮಂಡ್ಯನಗರ ಪಿ ಇ ಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುರುದೇವ ಅಕಾಡೆಮಿಯ ಆಫ್ ಫೈನ್ ಆರ್ಟ್ಸ್ ಕಾರ್ಯದರ್ಶಿ ಡಾ. ಚೇತನ ರಾಧಾಕೃಷ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಗುರುದೇವೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಕಾಡೆಮಿಯ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಗುರುದೇವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಗೆ ವಿದ್ವಾನ್ ಪ್ರಕಾಶ್ ಅಯ್ಯರ್, ಬೆಳಕು ವಿನ್ಯಾಸಕಾರ ಎಂಎಲ್ ರಾಜನ್, ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಹಾಗೂ ವಿದುಷಿ ಶುಭ ಧನಂಜಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸೆ.14ರಂದು ನಡೆಯುವ ಕಾರ್ಯಕ್ರಮವನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ರವಿಕುಮಾರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಶುಭಾಶಯ ನುಡಿಗಳನ್ನು ಆಡಲಿದ್ದಾರೆ ಎಂದರು.
15ರಂದು ಸಂಜೆ 4 ಗಂಟೆಗೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಬಿ.ಎಮ್. ಅಪ್ಪಾಜಪ್ಪ ಅಧ್ಯಕ್ಷತೆ ಮತ್ತು ಕೆಎಎಸ್ ಅಧಿಕಾರಿ ಎಲ್ ಸಂತೋಷ್ ಅವರ ಶುಭ ಹಾರೈಕೆಯೊಂದಿಗೆ ಶಾಸ್ತ್ರೀಯ ನೃತ್ಯೋತ್ಸವ ನಡೆಯಲಿದ್ದು ,ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಅಧ್ಯಕ್ಷೆ ಇಂದಿರಾ ಸತೀಶ್ ಬಾಬು, ಜನಪದ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಭಾಗವಹಿಸುವರು ಎಂದರು.
ಸೆ.16ರಂದು ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಿ ಇ ಟಿ ಅಧ್ಯಕ್ಷ ಕೆ ಎಸ್ ವಿಜಯಾನಂದ ಅವರು ವಹಿಸಲಿದ್ದು ,ಖ್ಯಾತ ಮನೋವೈದ್ಯ ಡಾ. ಟಿ ಎಸ್ ಸತ್ಯನಾರಾಯಣ ರಾವ್ ,ಎಸ್ ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂಧರು.
ಗೋಷ್ಠಿಯಲ್ಲಿ ಗುರುದೇವ ಅಕಾಡೆಮಿ ನಿರ್ದೇಶಕ ಪಿಎಂ ರಾಧಾಕೃಷ್ಣ, ಎಂ.ಎಲ್ ರಾಜನ್ ಉಪಸ್ಥಿತರಿದ್ದರು.