ವರ್ಷಾಂತ್ಯ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಂಡ್ಯ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲು ಹಾಗೂ ಸಕ್ಕರೆ ನಗರವನ್ನು ತಳಿರು- ತೋರಣಗಳಿಂದ ಸಿಂಗರಿಸಲು ನಿರ್ಧರಿಸಲಾಗಿದೆ.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಸಮಿತಿ ಸಭೆಯಲ್ಲಿ ಶಾಸಕ ಹಾಗೂ ಸಮಿತಿಯ ಅಧ್ಯಕ್ಷ ರವಿಕುಮಾರ ಗಣಿಗ ಮಾತನಾಡಿ, ‘ನಮ್ಮ ನಗರ- ನಮ್ಮ ಶೃಂಗಾರ’ ಎನ್ನುವಂತೆ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು- ತೋರಣಗಳಿಂದ ನಗರವನ್ನು ಅಲಂಕಾರ ಮಾಡಬೇಕೆಂದರು.
ನಗರದ ಯಾವ ಯಾವ ಸ್ಥಳದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು, ಎಷ್ಟು ಕಿಲೋ ಮೀಟರ್ ಮಾಡಬೇಕು, ಖಾಸಗಿ ಕಟ್ಟಡಗಳ ಮೇಲು ದೀಪಾಲಂಕಾರ ಮಾಡುವಂತೆ ವರ್ತಕರ ಸಂಘಕ್ಕೆ ಮನವಿ ಮಾಡಲಾಗುವುದೆಂದರು. ಇದಕ್ಕೆ ಸಂಬಂಧಿಸಿದ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ನೀಡಲಾಗುವುದೆಂದರು.
ಕಸಾಪ ಸಂಚಾಲಕರಾದ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಮನೆ ಮುಂದೆ ರಂಗೋಲಿ, ದೀಪ,
ಮನೆ ಮೇಲೆ ಕನ್ನಡದ ಬಾವುಟ ಹಾರಿಸುವಂತೆ ನಗರದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದರು.
ಗೌ.ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಜಿಲ್ಲೆಯ ಪ್ರಮುಖ ಕವಿಗಳ ಭಾವಚಿತ್ರವನ್ನು ವಿದ್ಯುತ್ ದೀಪಗಳಿಂದ ಚಿತ್ರಿಸಬೇಕೆಂದರು.
ಸಭೆಯಲ್ಲಿ ಮೂಡಾದ ಅಧ್ಯಕ್ಷ ನಹೀಮ್, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಮಹಾಲಿಂಗಯ್ಯ,
ವಿಶೇಷಾಧಿಕಾರಿ ಚಂದ್ರಶೇಖರ್, ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ದರಸಗುಪ್ಪೆ ಧನಂಜಯ, ಚಂದ್ರಲಿಂಗು, ಸುಜಾತಕೃಷ್ಣ, ಸುವರ್ಣಾವತಿ ಹಾಗೂ ನಗರಸಭೆ ಅಭಿಯಂತರ ರವಿಕುಮಾರ್,
ಮುಂತಾದವರಿದ್ದರು.