ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಜೈಲು ಪಾಲಾಗಿರುವ ಪವಿತ್ರಾ ಗೌಡ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೇ, ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ 3992 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು.
ಕಾನೂನಿನ ಪ್ರಕಾರ, ಆರೋಪ ಪಟ್ಟಿ ಸಲ್ಲಿಕೆಯ ನಂತರವಷ್ಟೇ ಆರೋಪಿಗಳು ಜಾಮೀನು ಸಲ್ಲಿಸಲು ಅವಕಾಶವಿದೆ. ಹಾಗಾಗಿ, ಜಾಮೀನು ಸಲ್ಲಿಸಲು ಅತ್ತ ನಟ ದರ್ಶನ್ ಪರವಾಗಿರುವ ವಕೀಲರು ತಯಾರಿ ನಡೆಸಿದ್ದಾರೆ.
ಅಸಲಿಗೆ, ಈ ಕೇಸ್ ನ ವಿಚಾರಣೆ ನಡೆಯುತ್ತಿರುವ ಬೆಂಗಳೂರಿನ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನಿಗೆ ಅವರು ಅರ್ಜಿ ಸಲ್ಲಿಸಬಹುದು. ಆದರೆ, ಪವಿತ್ರಾ ಗೌಡ ಅವರು ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಮುನ್ನವೇ ಹೈಕೋರ್ಟ್ ಮೊರೆ ಹೋಗಿರುವುದು ಕುತೂಹಲ ತಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿಯಾಗಿದ್ದಾರೆ. ಇತ್ತೀಚೆಗೆ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ರೇಣುಕಾಸ್ವಾಮಿಯವರ ಕೊಲೆಗೆ ಮೂಲ ಕಾರಣವೇ ಇವರು ಎಂದು ಉಲ್ಲೇಖಿಸಲಾಗಿದ್ದು, ಬೆಂಗಳೂರಿನ ಪಟ್ಟಣಗೆರೆಯ ಶೆಟ್ ನಲ್ಲಿ ರೇಣುಕಾಸ್ವಾಮಿಯವರ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸುವಾಗ ಕಿಲ್ ಹಿಮ್ ಎಂದು ನಟ ದರ್ಶನ್ ಗೆ ಹೇಳುವ ಮೂಲಕ ಗ್ಯಾಂಗಿನ ಸದಸ್ಯರಿಗೆ ಆತನನ್ನು ಕೊಲ್ಲಲು ಪ್ರೇರೇಪಣೆ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅವರನ್ನೇ ಎ1 ಆರೋಪಿ ಎಂದು ಘೋಷಿಸಲಾಗಿದೆ.